ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷ್ಣನ ಸನ್ನಿಧಿಯಲ್ಲಿ ರಾಮರಾಜ್ಯ ಕನಸು’

ಪೇಜಾವರ ಶ್ರೀ ಸನ್ಯಾಸ ಸ್ವೀಕರಿಸಿ 80 ವರ್ಷ ಸಂದಿರುವ ಪ್ರಯುಕ್ತ ಅಭಿನಂದನೆ
Last Updated 27 ಡಿಸೆಂಬರ್ 2018, 17:10 IST
ಅಕ್ಷರ ಗಾತ್ರ

ಉಡುಪಿ: ಸಮಾಜಕ್ಕೆ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಮಾರ್ಗದರ್ಶನದ ಅಗತ್ಯವಿದೆ. ಸ್ವಾಮೀಜಿ ಶತಾಯುಷಿಯಾಗಿ ಬದುಕಿ ಸಮಾಜಸೇವೆ ಮಾಡಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಹಾರೈಸಿದರು.

ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿ 80 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಗುರುವಾರ ಪೇಜಾವರ ಮಠಕ್ಕೆ ಭೇಟಿನೀಡಿದ ರಾಷ್ಟ್ರಪತಿಗಳು ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.

ಉಡುಪಿಯ ಶ್ರೀಕೃಷ್ಣಮಠಕ್ಕೆ ಬಂದಿರುವುದು ಸಂತಸ ತಂದಿದೆ. ಪೇಜಾವರ ಶ್ರೀಗಳ ಉತ್ಸಾಹದ ಜೀವನವನ್ನು ಕಂಡು ಅಚ್ಚರಿಯಾಗಿದೆ. 80 ವರ್ಷಗಳ ಸನ್ಯಾಸದ ಬದುಕು ಅಭಿನಂದನೀಯ ಎಂದು ಶ್ಲಾಘಿಸಿದರು. ಇದೇವೇಳೆ ಶ್ರೀಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಬಳಿಕ ಪೇಜಾವರ ಶ್ರೀಗಳು ಮಾತನಾಡಿ, ರಾಷ್ಟ್ರದ ಪ್ರತಿನಿಧಿಯಾಗಿ ರಾಷ್ಟ್ರಪತಿಗಳು ಶ್ರೀಕೃಷ್ಣನ ಸನ್ನಿಧಾನಕ್ಕೆ ಬಂದಿರುವುದು ಆನಂದ ತಂದಿದೆ. ಅವರಿಗೆ ಗೋವಿಂದನ ಅನುಗ್ರಹ ದೊರೆಯಲಿ ಎಂದರು.

ಯಕ್ಷಗಾನ ಮುಂದಲೆ ಸಮರ್ಪಣೆ

ಪೇಜಾವರ ಮಠದಿಂದ ರಾಷ್ಟ್ರಪತಿಗಳಿಗೆ ಯಕ್ಷಗಾನ‌ದ ಕೇದಗೆ ಮುಂದಲೆ ತೊಡಿಸಲಾಯಿತು. ಅಟ್ಟೆ ಪ್ರಭಾವಳಿ ಹಾಗೂ ಶ್ರೀಕೃಷ್ಣನ ಪಂಚಲೋಹ ಮೂರ್ತಿ, ಪೇಜಾವರ ಶ್ರೀಗಳು ಬರೆದ 12 ಪುಸ್ತಕಗಳನ್ನು ಉಡುಗೊರೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ರಾಷ್ಟ್ರಪತಿ ಪತ್ನಿ ಸವಿತಾ ಕೋವಿಂದ ಹಾಗೂ ನಾಗಾಲ್ಯಾಂಡ್‌ ರಾಜ್ಯಪಾಲ ಪದ್ಮನಾಭ ಆಚಾರ್ಯ ಅವರ ಪತ್ನಿ ಕವಿತಾ ಆಚಾರ್ಯ ಅವರಿಗೆ ಸೀರೆ ಹಾಗೂ ಶಂಕರಪುರ ಮಲ್ಲಿಗೆಯನ್ನು ಪ್ರಸಾದವಾಗಿ ನೀಡಲಾಯಿತು. ಬಳಿಕ ಶ್ರೀಕೃಷ್ಣ
ಮಠಕ್ಕೆ ತೆರಳಿದ ರಾಷ್ಟ್ರಪತಿಗಳು ಕೃಷ್ಣನ ದರ್ಶನ ಪಡೆದರು. ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು 1.5 ಅಡಿ ಎತ್ತರದ ಕಡೆಗೋಲು ಶ್ರೀಕೃಷ್ಣನ ಪಂಚಲೋಹದ ವಿಗ್ರಹ ಹಾಗೂ ಶ್ರೀಕೃಷ್ಣಮಠದ ಗರ್ಭಗುಡಿ ಸ್ವರ್ಣ ಮಾದರಿ ಉಡುಗೊರೆಯಾಗಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT