ಉಡುಪಿ: ದುರ್ಯೋಧನನನ್ನು ವೈಭವರೀಕರಿಸುವ ಚಿತ್ರ ಮಹಾಭಾರತಕ್ಕೆ ಅಪಚಾರ ಮಾಡಿದಂತೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಪರ್ಯಾಯ ಪಲಿಮಾರು ಮಠ, ತತ್ವ ಸಂಶೋಧನ ಸಂಸತ್ ಸಹಯೋಗದಲ್ಲಿ ಕೃಷ್ಣ ಮಠದದ ರಾಜಾಂಗಣದಲ್ಲಿ ಬುಧವಾರ ಆರಂಭವಾದ ಸಮಗ್ರ ಮಹಾಭಾರತ ಸಂಪುಟದ ಸಮರ್ಪಣ ಉತ್ಸವ, ಶ್ರೀವ್ಯಾಸ-ದಾಸ ವಿಜಯ ಉತ್ಸವದಲ್ಲಿ ವಿಷ್ಣು ಸಹಸ್ರನಾಮ ಗ್ರಂಥದ ಮೂರು ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ದುರ್ಯೋಧನ ಪ್ರಧಾನ ಚಿಂತನೆಗಳನ್ನು ತುಂಬುವುದು ವಿಕೃತವಾದುದು. ದುರ್ಯೋಧನ ಎಂದೂ ಪ್ರಧಾನನಲ್ಲ. ಪಾಂಡವರೇ ನಾಯಕರಾಗಬೇಕು. ಈ ನಿಟ್ಟಿನಲ್ಲಿ ಮಹಾಭಾರತದ ಚಿಂತನ ಮಂಥನ ನಡೆಯಬೇಕು ಎಂದರು.
ಮಹಾಭಾರತ ದೇಶ ಕಾಲ ಪರಿಧಿ ಮೀರಿದ್ದು. ಸಾರ್ವಕಾಲಿಕ ಸಂದೇಶ ಮುಟ್ಟಿಸುವ ಕೃತಿ. ಅಧರ್ಮ ನಾಶವಾಗಬೇಕು ಧರ್ಮ ಉಳಿಯಬೇಕು ಎಂಬುದು ಮಹಾಭಾರತದ ಸಾರ ಎಂದರು.
ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥರು ಗ್ರಂಥ ಬಿಡುಗಡೆ ಮಾಡಿದರು. ಸಂಸದ ತೇಜಸ್ವಿ ಸೂರ್ಯ, ಪರ್ಯಾಯ ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರತೀರ್ಥರು, ಸಂಸ್ಕೃತ ವಿ.ವಿ. ಕುಲಪತಿ ಪ್ರೊ.ವಿ. ಗಿರೀಶ್ಚಂದ್ರ, ಅಂಕಣಕಾರ ರೋಹಿತ್ ಚಕ್ರತೀರ್ಥ ಇದ್ದರು.