ಉಡುಪಿ: ಭಯೋತ್ಪಾದನೆ, ಹಿಂಸೆ, ದ್ವೇಷ ಹಾಗೂ ಕ್ರೂರ ಕೃತ್ಯಗಳಿಂದ ಜಗತ್ತನ್ನು ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಶಾಂತಿ, ಪ್ರೀತಿ, ಅಹಿಂಸೆ ಹಾಗೂ ಕ್ಷಮೆ ಮೂಲಕ ಜಗತ್ತನ್ನು, ಮಾನವ ಕುಲವನ್ನು ಜಯಿಸಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಅವರು ಹೇಳಿದರು.
ಗುರುವಾರ ಸಂಜೆ ನಗರದ ಶೋಕಮಾತ ಇಗರ್ಜಿಯಲ್ಲಿಶ್ರೀಲಂಕಾ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಲಂಕಾದಲ್ಲಿ ಉಗ್ರರ ಕೃತ್ಯಕ್ಕೆ 45ಕ್ಕೂ ಹೆಚ್ಚು ಮಕ್ಕಳು ಪ್ರಾಣಾರ್ಪಣೆ ಮಾಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಬಲಿಯಾಗಿದ್ದಾರೆ. ಈ ಕ್ರೂರ ಕೃತ್ಯವನ್ನು ಇಡೀ ಜಗತ್ತು ಖಂಡಿಸುತ್ತದೆ ಎಂದರು.
ಬದುಕು ಕಟ್ಟಲು ಎಷ್ಟ ಎಂಬ ಸಂಗತಿಯನ್ನು ಬದುಕು ನಾಶಮಾಡಲು ಹೊರಟವರು ಅರ್ಥ ಮಾಡಿಕೊಂಡಿದ್ದರೆ ಇಂತಹ ನೀಚ ಕೃತ್ಯಗಳು ಸಂಭವಿಸುತ್ತಿರಲಿಲ್ಲ. ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಇದೇವೇಳೆ ಎಲ್ಲರೂ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.