ಉಡುಪಿ: ಸೈನಿಕರು ದೇಶದ ಆಸ್ತಿ, ಅವರ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಯೋಧರ ಮೇಲಿನ ದಾಳಿ ಜನರಾ ಆತ್ಮಾಭಿಮಾನದ ವಿಷಯ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅಜ್ಜರಕಾಡು ಸೈನಿಕರ ಯುದ್ಧಸ್ಮಾರಕದ ಎದುರು ಬಿಜೆಪಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಯೋಧರ ಮೇಲಿನ ಭಯೋತ್ಪಾದಕರ ದಾಳಿ ಧರ್ಮ ಹಾಗೂ ದೇಶಕ್ಕೆ ಸೀಮಿತವಲ್ಲ. ಭಯೋತ್ಪಾದನಾ ದಾಳಿ ತಡೆಯಲು ವಿಶ್ವವೇ ಒಂದಾಗಬೇಕು ಎಂದರು.
ದೇಶದ ಸಾರ್ವಭೌಮತ್ವ ಹೆಚ್ಚಿಸಬೇಕು. ಹೇಡಿಗಳಂತೆ ದಾಳಿ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಸೈನಿಕರ ಪ್ರಾಣತ್ಯಾಗ ವ್ಯರ್ಥವಾಗಲು ಬಿಡಬಾರದು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಮುಖಂಡರಾದ ಯಶಪಾಲ್ ಸುವರ್ಣ, ಬೈಕಾಡಿ ಸುಪ್ರಸಿದ್ಧ ಶೆಟ್ಟಿ, ಶ್ರೀಶ ನಾಯಕ್, ಶ್ಯಾಮಲಾ ಕುಂದರ್, ರಜನಿ ಹೆಬ್ಬಾರ್ ಇದ್ದರು. ಶ್ರದ್ಧಾಂಜಲಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ಮಾಜಿ ಸೈನಿಕರು ಉಪಸ್ಥಿತರಿದ್ದರು.
ಕರವೇ ಪ್ರತಿಭಟನೆ:ಕರ್ನಾಟಕ ರಕ್ಷ ಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ)ದಿಂದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅನ್ಸಾರ್ ಅಹಮದ್, ಪ್ರವೀಣ್ ಪೂಜಾರಿ, ಸುಧೀರ್ ಪೂಜಾರಿ, ಇಕ್ಬಾಲ್, ಮಧುಕರ್, ರಾಘವೇಂದ್ರ, ಪ್ರಸನ್ನ ಶೆಟ್ಟಿ ಇದ್ದರು.