ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿ ಭವ್ಯಾ ನಾಯಕ್ 597 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯೋದಯ ಪಿಯು ಕಾಲೇಜಿನ ಓಂಕಾರ್ ಪ್ರಭು, (596), ಕಾರ್ಕಳದ ಭುವನೇಂದ್ರ ಪಿಯು ಕಾಲೇಜಿನ ಯು.ಎಸ್.ಅದ್ವೈತ್ ಶರ್ಮ (596) ತೃತೀಯ ಸ್ಥಾನ ಪಡೆದಿದ್ದಾರೆ.
ಶೇ 86.38 ಫಲಿತಾಂಶ ಪಡೆದಿರುವ ಉಡುಪಿ ಜಿಲ್ಲೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿತ್ತು. 2020ನೇ ಸಾಲಿನಲ್ಲಿ ಉಡುಪಿ ಶೇ 90.71ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿತ್ತು.
ಕಳೆದ 10 ವರ್ಷಗಳ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುತ್ತ ಬಂದಿದ್ದು, ಒಮ್ಮೆಯೂ ಮೂರನೇ ಸ್ಥಾನಕ್ಕೆ ಕುಸಿದಿಲ್ಲ.