ಬೈಂದೂರು: ‘ಹೊರರಾಜ್ಯಗಳಿಂದ ಹಿಂತಿರುಗಿರುವ ಎಲ್ಲರಿಗೆ 14 ದಿನಗಳ ಸರ್ಕಾರಿ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಆದರೆ ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರ ಗಂಟಲ ದ್ರವ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಕಂಡುಬಂದರೆ ಅವರನ್ನು ಅವಧಿಗೆ ಮೊದಲೇ ಹೋಂ ಕ್ವಾರಂಟೈನ್ಗೆ ಬದಲಿಸಲಾಗುವುದು’ ಎಂದುಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೈಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಿಗೆ ಹಾಗೂ ಶಿರೂರು ಟೋಲ್ಗೇಟ್ನಲ್ಲಿ ಕಾರ್ಯಾಚರಿಸುತ್ತಿರುವ ಚೆಕ್ಪೋಸ್ಟ್ಗೆಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಉಡುಪಿ ಜಿಲ್ಲೆಗೆ 4,500ಕ್ಕೂ ಅಧಿಕ ಜನರು ಹೊರರಾಜ್ಯಗಳಿಂದ ಹಿಂತಿರುಗಿದ್ದಾರೆ. ಅವರ ಕ್ವಾರಂಟೈನ್ಗಾಗಿ 120 ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಸಣ್ಣಪುಟ್ಟ ಕೊರತೆ ಇರುವುದು ಸಹಜ. ಅದನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಲ್ಲಕಡೆ ಊಟದ ಹೊಣೆಯನ್ನು ದೇವಾಲಯಗಳಿಗೆ ವಹಿಸಲಾಗಿದೆ’ ಎಂದರು.
ಐತಿಹಾಸಿಕ ನಿರ್ಧಾರ: ‘ದೇಶದ ಅಥವಾ ವಿಶ್ವದ ಇತಿಹಾಸದಲ್ಲಿಯೇ ಯಾವುದೇ ಸರ್ಕಾರ ದೇಶದ ಜಿಡಿಪಿಯ ಶೇ 10ರಷ್ಟನ್ನು ಜನರ ಸಮಸ್ಯೆ ಬಗೆಹರಿಸಲು ನೀಡಿದ ದಾಖಲೆ ಇಲ್ಲ. ₹ 20 ಲಕ್ಷ ಕೋಟಿ ವ್ಯಯದಿಂದ ದೇಶದ ಕೈಗಾರಿಕೆ, ಕೃಷಿ, ಬೆಳವಣಿಗೆಯ ವೇಗ ವೃದ್ಧಿಸಲಿದೆ. ಮೀನುಗಾರರ ಕಲ್ಯಾಣಕ್ಕಾಗಿ ₹ 20 ಸಾವಿರ ಕೋಟಿ ಅನುದಾನ ನೀಡಿರುವುದೂ ಮಹತ್ವದ ಹೆಜ್ಜೆ. ಮೀನುಗಾರಿಕಾ ಸಚಿವನಾಗಿ ರಾಜ್ಯದ ಪಾಲಿನಿಂದ ಮೀನುಗಾರಿಕೆಯನ್ನು ಮುಖ್ಯ ಉದ್ಯಮವಾಗಿ ರೂಪಿಸಲು ಪ್ರಯತ್ನಿಸುವೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಸದಸ್ಯರಾದ ಮಹೇಂದ್ರ ಪೂಜಾರಿ, ಪುಪ್ಪರಾಜ್ ಶೆಟ್ಟಿ, ದಸ್ತಗೀರ್ ಸಾಹೇಬ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಬೈಂದೂರು ತಹಶೀಲ್ದಾರ ಬಿ.ಪಿ. ಪೂಜಾರ್ ಇದ್ದರು.