ಉಡುಪಿ: ಖಾತೆ ಹಂಚಿಕೆಯಲ್ಲಿ ಹೊಸ ಗೊಂದಲ ಶುರುವಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆಯಂತೆ ಬೆಂಗಳೂರಿಗೆ ತೆರಳುತ್ತಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಉಡುಪಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ಆನಂದ್ ಸಿಂಗ್ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ. ರಾಜು ಗೌಡಗೆ ರಾಜೀನಾಮೆ ನಿರ್ಧಾರಕ್ಕೆ ಮುಂದಾಗದಂತೆ ಹೇಳಿದ್ದೇನೆ. ಅಸಮಾಧಾನಗೊಂಡಿರುವವರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ರಾಜಕೀಯದಲ್ಲಿ ಅಸಮಾಧಾನ ಬೇಗುದಿ ಸಾಮಾನ್ಯ. ಮುಖ್ಯಮಂತ್ರಿ ನೇತೃತ್ವದಲ್ಲಿ ಎಲ್ಲ ಗೊಂದಲಗಳು ಬಗೆಹರಿಯಲಿವೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ, ಸುಧಾಕರ್, ಬಿ.ಸಿ.ಪಾಟೀಲ್, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಎಂಟಿಬಿ ನಾಗರಾಜ್ ಸೇರಿದಂತೆ ಪಕ್ಷ ತೊರೆದು ಬಂದವರಿಗೆ ಬಿಜೆಪಿ ಉತ್ತಮ ಖಾತೆಗಳನ್ನು ನೀಡಿ ಗೌರವಯುತವಾಗಿ ನಡೆಸಿಕೊಂಡಿದೆ. ಆದರೆ, ಕಾಂಗ್ರೆಸ್ನಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಹಾಗೂ ಗೌರವ ಸಿಕ್ಕಿರಲಿಲ್ಲ ಎಂದರು.
ಗೋಶಾಲೆಗಳಿಗೆ ಗೋಮಾಳ:ರಾಜ್ಯದ ಗೋಮಾಳ ಜಾಗವನ್ನು ಗೋಶಾಲೆಗಳನ್ನು ನಡೆಸಲು ಮಠ ಮಂದಿರಗಳಿಗೆ ನೀಡುವ ಉದ್ದೇಶವಿದೆ. ಗೋವುಗಳ ಹಾಗೂ ಗೋ ತಳಿಗಳ ರಕ್ಷಣೆ ಅಗತ್ಯವಾಗಿ ಆಗಬೇಕಾದ ಕೆಲಸ. ಗೋಶಾಲೆಗಳಿಗೆ, ದಾನ ಧರ್ಮದಲ್ಲಿ ನಿರತವಾಗಿರುವ ಸಂಸ್ಥೆಗಳಿಗೆ ಸರ್ಕಾರಿ ಭೂಮಿಯನ್ನು ಕೊಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.