ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಅಬ್ಬರಿಸಿದ್ದ ಮಳೆ ಬುಧವಾರ ಕೊಂಚ ಇಳಿಮುಖವಾಗಿತ್ತು. ಬಿರುಸಾಗಿ ಮಳೆ ಸುರಿಯದಿದ್ದರೂ ಗಾಳಿಯ ಅಬ್ಬರ ಜೋರಾಗಿತ್ತು. ದಿನವಿಡೀ ಜಿಟಿ–ಜಿಟಿ ಮಳೆ ಸುರಿಯುತ್ತಿತ್ತು.
ಭಾರಿ ಹಾನಿ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದ್ದು, ನೂರಾರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸೂರು ಕಳೆದುಕೊಂಡು ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಭೂಮಿಗೆ ನೀರು ನುಗ್ಗಿದ್ದು ಬೆಳೆಗಳು ನಾಶವಾಗಿವೆ. ಅಡಿಕೆ ಹಾಗೂ ಬಾಳೆಯ ತೋಟಗಳಿಗೆ ಹಾನಿಯಾಗಿದ್ದು, ಮರಗಳು ಮುರಿದು ಬಿದ್ದಿವೆ.
ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಸರಾಸರಿ 127.60 ಮಿ.ಮೀ ಮಳೆಯಾಗಿದೆ. ಉಡುಪಿಯಲ್ಲಿ 97.4, ಕುಂದಾಪುರದಲ್ಲಿ 156.3, ಕಾರ್ಕಳದಲ್ಲಿ 112.3 ಮಿ.ಮೀ ಮಳೆಯಾಗಿದೆ.
ಕಾಪು ತಾಲ್ಲೂಕಿನಪಾದೂರು, ಪಿಲಾರು, ಪಡು, ಉಳಿಯಾರು ಗೋಳಿ, ಕಳತ್ತೂರು, ಪಾಂಗಾಳದಲ್ಲಿ 14 ಮನೆಗಳ ಗೋಡೆ ಕುಸಿದಿದೆ. ಹೆಂಚುಗಳು ಹಾರಿಹೋಗಿವೆ. ಮನೆಗೆ ನೀರು ನುಗ್ಗಿ ಅಪಾರ ಪ್ರಮಾಣ ಆಸ್ತಿ ನಷ್ಟವಾಗಿದೆ.
ನೆರೆ ಇಳಿಮುಖ:ಮಂಗಳವಾರ ಸುರಿದ ಮಳೆಗೆ ಬನ್ನಂಜೆ, ಮೂಡನಿಡಂಬೂರು, ಪಡುಕೆರೆ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಮಳೆ ಕ್ಷೀನವಾಗಿದ್ದರಿಂದ ನೀರು ಇಳಿಮುಖವಾಗಿದ್ದು, ಮನೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ.