ಉಡುಪಿ: ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯುತ್ತಿದ್ದು, ಕಡಲು ಪ್ರಕ್ಷುಬ್ಧಗೊಂಡಿದೆ. ಕಾಪುವಿನ ಮೂಳೂರಿನ ಸಮುದ್ರ ಕಿನಾರೆಯಲ್ಲಿ ಕಡಲ್ಕೊರೆತ ಭೀತಿ ಉಂಟಾಗಿದ್ದು, ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ.
ಮಳೆ ಮುಂದುವರಿದರೆ ನದಿಗಳು ಉಕ್ಕಿ ಹರಿಯಲಿದ್ದು, ನೆರೆ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಸ್ವರ್ಣಾ, ಸೀತಾ ನದಿಗಳಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಬುಧವಾರ ರಾತ್ರಿ ಸಿಡಿಲು ಬಡಿದು ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಗ್ರಾಮದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಗಾಳಿ ಮಳೆಗೆ ಬೈಕಾಡಿ, ಹಾರಾಡಿ, ಕಚ್ಚೂರು, ಪಾಂಡೇಶ್ವರ, ಚಾಂತಾರಿನಲ್ಲಿ ಮನೆ, ಕೊಟ್ಟಿಗೆಗಳು ಕುಸಿದಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 61.80 ಮಿ.ಮೀ ಮಳೆಯಾಗಿದೆ. ಮಂಗಳವಾರ ಬೈಂದೂರಿನ ಕಾಲ್ತೋಡು ಗ್ರಾಮದ ಬೊಳ್ಳಂಬಳ್ಳಿ ಬಣಗೇರಿಯ ಕೊಡ್ಲ ಹಳ್ಳದಲ್ಲಿ ಕಾಲುಜಾರಿ ಬಿದ್ದು ನಾಪತ್ತೆಯಾಗಿರುವ ಗೋಪು ಸುಕ್ರನಾಯ್ಕ (58) ಅವರ ಪತ್ತೆ ಕಾರ್ಯ ಮುಂದುವರಿದಿದೆ.r
ಭಾರಿ ಮಳೆ ಮುನ್ಸೂಚನೆ
ಜೂನ್ 23ರವರೆಗೂ ಕರಾವಳಿ ಜಿಲ್ಲೆಗಳಲ್ಲಿ ಬಿರುಸಿನ ಮಳೆ ಸುರಿಯುಲಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ 45 ರಿಂದ 55 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. 3 ರಿಂದ 3.5 ಮೀಟರ್ ಎತ್ತರದ ದೈತ್ಯ ಅಲೆಗಳು ಏಳುವ ಸಂಭವವಿದ್ದು, ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.