ಉಡುಪಿ: ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿ ಗುಡುಗು ಸಿಡಿಲು ಸಹಿತ ಬಿರುಸಾಗಿ ಮಳೆ ಸುರಿಯಿತು. ಏಕಾಏಕಿ ಗುಡುಗು, ಸಿಡಿಲು, ಗಾಳಿಯ ಅಬ್ಬರ ಕಂಡು ನಾಗರಿಕರು ಬೆಚ್ಚಿಬಿದ್ದರು.
ಸುಮಾರು 1 ತಾಸು ಎಡೆಬಿಡದೆ ಸುರಿದ ಮಳೆ ಅವಾಂತರ ಸೃಷ್ಟಿಸಿತು. ನಗರದ ರಸ್ತೆಗಳೆಲ್ಲ ನೀರಿನಿಂದ ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ನಗರದ ಬಹುತೇಕ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಬನ್ನಂಜೆ, ಮೂಡನಿಡಂಬೂರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.ಪಡುಬಿದ್ರಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು ಕಡಲ್ಕೊರೆತ ಉಂಟಾಗಿದೆ.
ಬೈಂದೂರಿನಲ್ಲಿ ಮಧ್ಯಾಹ್ನ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡವು.ರಸ್ತೆಗಳ ಮೇಲೆ ನೀರು ಹರಿಯುತ್ತಿತ್ತು. ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಕಾಪು, ಹೆಬ್ರಿ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ.
ಬೈಂದೂರಿನಲ್ಲಿ ಎರಡು ಮನೆಗಳು ಹಾಗೂ ಬ್ರಹ್ಮಾವರದಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ.ಕಳೆದ 24 ಗಂಟೆಗಳಲ್ಲಿ ಉಡುಪಿ 49, ಕುಂದಾಪುರ 59.1, ಕಾರ್ಕಳ 58 ಮಿ.ಮೀ ಸೇರಿ ಜಿಲ್ಲೆಯಲ್ಲಿ ಸರಾಸರಿ 56.1 ಮಿ.ಮೀ ಮಳೆಯಾಗಿದೆ.