ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆ ಪ್ರಶ್ನಿಸಬೇಕು: ಪ್ರೊ.ಸಬಿಹಾ

ಪ್ರಲೋಭನೆಯ ಜಗತ್ತಿನಲ್ಲಿ ಯುವಜನ ಕೊಳ್ಳುಬಾಕತನ ದಾಸರಾಗುತ್ತಿದ್ದಾರೆ
Last Updated 13 ಏಪ್ರಿಲ್ 2018, 10:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಮಾಜದ ಅನಿಷ್ಟಗಳನ್ನು ಸರಿಪಡಿಸಲು ನಮ್ಮ ಸಮಾಜದ ಯುವಜನತೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಕೋಮು ಸೌಹಾರ್ದತೆ, ಸಾಕ್ಷ್ಯಪರತೆಗೆ ಮಾದರಿ ಎಲ್ಲಿ ಸಿಗುತ್ತದೆ ಎಂಬ ಹುಡುಕಾಟ ನಡೆಸಬೇಕು. ನಿಮ್ಮೊಳಗಿನ ಶಕ್ತಿ ನಿಮಗೆ ಅರಿವಾದರೆ, ಸಮಾಜದ ಬದಲಾವಣೆಯಲ್ಲಿ ನೀವು  ತೊಡಗಿಸಿಕೊಳ್ಳುತ್ತೀರಿ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಬಿಹಾ ಬಿ ಎಂದು ಹೇಳಿದರು.

ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 51ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದಿಕ್ಕು ತಪ್ಪಿಸುವ, ಪ್ರಲೋಭನೆಯ ಜಗತ್ತಿನಲ್ಲಿ ಯುವಜನರು ಉಸಿರಾಡುತ್ತಿದ್ದಾರೆ.  ಕೊಳ್ಳುಬಾಕತನದ ದಾಸರಾಗುತ್ತಿದ್ದಾರೆ’ ಎಂದು ಟೀಕಿಸಿದರು

‘ಖರೀದಿಯ ಸಾಮರ್ಥ್ಯ ಇಲ್ಲದವರಲ್ಲಿ ಕೊಳ್ಳುಬಾಕತನವು ಸುತ್ತಲಿನ ಪರಿಸರದ ಬಗ್ಗೆ ಹತಾಶೆ ಮನೋಭಾವ ಉಂಟಾಗುವಂತೆ ಮಾಡುತ್ತದೆ. ಇಂತಹ ಮರೀಚಿಕೆಯ ಬೆನ್ನಿಗೆ ಬಿದ್ದಂತಾಗುವ ಸ್ಥಿತಿ ಆತಂಕಕಾರಿಯಾದದ್ದು.ಆಯಸ್ಕಾಂತದಂತೆ ಸೆಳೆಯುವ ಪ್ರಲೋಭನೆಯಿಂದ ಹೊರಬರಬೇಕು. ಸಾಮಾಜಿಕ ಜಾಲತಾಣಗಳ ಚಟಕ್ಕೆ ಬಿದ್ದು ಯಂತ್ರಗಳಂತೆ ಬದುಕುವುದನ್ನು ಬಿಡಬೇಕು’ ಎಂದು ಸಲಹೆ ಮಾಡಿದರು.

‘ಮಾನವೀಯತೆ ಸಾಯುತ್ತಿದೆ. ಮನುಷ್ಯ ಧರ್ಮಕ್ಕಿಂತ, ಧರ್ಮ, ಜಾತಿ, ಸಂಪ್ರದಾಯಗಳೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ನಮ್ಮಂತದ್ದೇ ಜೀವಗಳನ್ನು ಸಜೀವ ದಹನ ಮಾಡುತ್ತಿರುವುದು ನಮ್ಮಲ್ಲಿ ತಲ್ಲಣ ಉಂಟುಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಮಗೆ ಸ್ವಾತಂತ್ರ್ಯವಿದೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಹುಡುಗ, ಹುಡುಗಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ ಆಲೋಚನೆಗಳಿಗೆ ಅವಕಾಶಗಳಿಲ್ಲ. ಆದ್ದರಿಂದಲೇ ಮರ್ಯಾದೆಗೇಡು ಹತ್ಯೆಗಳು ಹೆಚ್ಚುತ್ತಿವೆ. ಜಾತಿ, ಧರ್ಮ ಗೋಡೆಗಳ ಕೆಡವಿ ಒಂದಾಗುವುದಕ್ಕೆ ಅಂತರ ಧರ್ಮೀಯ ಮದುವೆಗೆ ಪ್ರಗತಿಪರ ಗುಂಪುಗಳು ಬೆನ್ನೆಲುಬಾಗಿ ನಿಂತಿರುವುದು ಸಮಾಧಾನದ ಸಂಗತಿ’ ಎಂದು ಅಭಿಪ್ರಾಯ ಪಟ್ಟರು.

ಬಿ.ಕಾಂ. ಪದವಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಸರಿತಾ ನಿರಂಜನ್, ಬಿ.ಎ. ಪದವಿಯಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ ಮೊನಾಲಿ ಮೊಮಾಯ ಅವರಿಗೆ ಚಿನ್ನದ ಪದಕ ಮತ್ತು ಚಿನ್ನದ ಉಂಗುರ ನೀಡಿ ಅಭಿನಂದಿಸಿದರು.

ಎಸ್‌ಜೆಎಂವಿ ಸಂಘದ ಕಾರ್ಯದರ್ಶಿ ಅರವಿಂದ ಕುಬಸದ ಡಾ.ಎ.ಜಿ.ನಾಡಗೌಡ, ಪ್ರೊ.ಸಿಸಿಲಿಯಾ ಡಿಕ್ರೂಜ್, ಪ್ರೊ.ವಿ.ಎಸ್.ಕಟ್ಟಿಮಠ, ಜಿ.ಎಚ್.ಕಳ್ಳಿಮಠ, ತರುಣ ಬಿ.ಜೆ, ಸುನೀತಾರಾಣಿ, ಸ್ಮಿತಾ ಪಾಟೀಲ, ಮಧು ಗೋಟುರೆ, ಐಶ್ವರ್ಯ ಏಕಬೋಟೆ, ಪೂಜಾ ಬೂದಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT