ಉಡುಪಿ: ಭಾರತ ವಿನಾಕಾರಣ ಯಾವ ದೇಶವನ್ನು ಕೆಣಕುವುದಿಲ್ಲ. ತಂಟೆಗೆ ಬಂದರೆ ತಕ್ಕ ಪ್ರತ್ಯುತ್ತರ ನೀಡಲಿದೆ. ಭಯೋತ್ಪಾದನೆ ಪೋಷಿಸುತ್ತಿರುವ ರಾಷ್ಟ್ರಕ್ಕೆ ಈಗಾಗಲೇ ಭಾರತದ ಶಕ್ತಿಯ ಅರಿವಾಗಿದೆ ಎಂದು ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದರು.
ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ಶುಕ್ರವಾರ ಮಾಹೆ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಮಾತನಾಡಿ, ಭಯೋತ್ಪಾದನೆಯನ್ನು ಮಟ್ಟಹಾಕುವ ವಿಚಾರದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ದೇಶ ಆಂತಕವಾದವನ್ನು ಸಹಿಸುವುದಿಲ್ಲ ಎಂದರು.
2047ರ ಹೊತ್ತಿಗೆ ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿರಲಿದೆ. ದೇಶದ ಯುವ ಸಂಪತ್ತು ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಆರ್ಥಿಕತೆಯ ಗುರಿ ಸಾಧನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ದಶಕಗಳ ಹಿಂದೆ ಜಾಗತಿಕ ಮಟ್ಟದ ವೇದಿಕೆಗಳಲ್ಲಿ ಭಾರತದ ಮಾತುಗಳನ್ನು ಇತರೆ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಪ್ರಸ್ತುತ ಭಾರತ ಮಾತನಾಡುತ್ತಿದ್ದರೆ ಇಡೀ ಜಗತ್ತು ಕಿವಿಗೊಟ್ಟು ಕೇಳುತ್ತದೆ. ಪ್ರತಿ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಇದು ಬದಲಾದ ಭಾರತದ ಸಾಮರ್ಥ್ಯ ಎಂದರು.
ಸಾಂಪ್ರದಾಯಿಕ ಹಾಗೂ ಆಧುನಿಕ ಜ್ಞಾನದ ಸಾರ ಶಿಕ್ಷಣದಲ್ಲಿ ಸಿಗಬೇಕು ಎಂಬುದು 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಎನ್ಇಪಿ ಅನುಷ್ಠಾನಗೊಳ್ಳುತ್ತಿದೆ ಎಂದರು.