ಉಡುಪಿ: ತಾಲ್ಲೂಕಿನ ಕುಕ್ಕೆಹಳ್ಳಿಯ ರಕ್ಷಿತಾ (19) ಈಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಅಸ್ವಾಭಾವಿಕ (ಯುಡಿಆರ್) ಸಾವು ಪ್ರಕರಣ ದಾಖಲಾಗಿದೆ.
ಮೃತ ಯುವತಿ ರಕ್ಷಿತಾ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ನಲ್ಲಿ ತರಬೇತಿ ಮುಗಿಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ಕುಕ್ಕೆಹಳ್ಳಿಗೆ ಬಂದು ಹೋಗುತ್ತಿದ್ದರು. ಅ.22ರಂದು ಬ್ಯಾಂಕ್ನ ಎಟಿಎಂ ಕಾರ್ಡ್ ಸರಿಮಾಡಿಸಿಕೊಳ್ಳಲು ರಕ್ಷಿತಾ ಉಡುಪಿಗೆ ಬಂದಿದ್ದರು.
ಅ.24ರಂದು ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನು ಪ್ರಶಾಂತ್ ಎಂಬುವರು ನಗರದ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಯುವತಿಯ ಪೋಷಕರಿಗೆ ವಿಷಯ ಮುಟ್ಟಿಸಿದ್ದರು. ಇದಾದ ಕೆಲ ಹೊತ್ತಿನಲ್ಲಿ ರಕ್ಷಿತಾ ಮೃತಪಟ್ಟಿದ್ದಳು.
ವಿಚಾರಣೆ:
ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ನಗರ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಶಾಂತ್ ಎಂಬಾತನನ್ನು ವಿಚಾರಣೆಗೊಳಪಡಿಸಲಾಗಿದೆ. ಯುವತಿ ಮರಣೋತ್ತರ ಪರೀಕ್ಷೆ ಕೈಸೇರಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.