ಆಹಾರ ಪದಾರ್ಥ ವ್ಯರ್ಥವಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎನ್ನುವುದನ್ನು ನಾವ್ಯಾರೂ ಮರೆಯಬಾರದು. ಅದು ಯಾವುದೇ ರೂಪದಲ್ಲಿ ಆಗಿರಬಹುದು ಎನ್ನುವುದು ನನ್ನ ಭಾವನೆ. ಉದಾಹರಣೆಗೆ ಮಹಾಮಸ್ತಕಾಭಿಷೇಕದಲ್ಲಿ ಗೊಮ್ಮಟ ಮೂರ್ತಿಯ ತಲೆಯ ಮೇಲಿಂದ ಸುರಿವ ಸಾವಿರಾರು ಕೊಡ ನೀರು, ಎಳನೀರು, ಹಾಲು, ಮೊಸರು, ತುಪ್ಪ, ಜೇನು, ಟನ್ಗಟ್ಟಲೆ ಸುರಿವ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಹಣ್ಣು-ಹಂಪಲಗಳು ವ್ಯರ್ಥವಾಗಿ ಮಣ್ಣು ಸೇರುವುದು ಸರಿಯೇ? ಒಂದು ಕ್ಷಣ ಯೋಚಿಸಿ. ಸಕಲ ವೈಭೋಗಗಳನ್ನು ತೊರೆದು ನಡೆದ ವೈರಾಗಿ, ಮಹಾತ್ಯಾಗಿ ಬಾಹುಬಲಿ ಇದನ್ನೆಲ್ಲಾ ಬೇಡುವನೇ? ಅದೇ ಪದಾರ್ಥವನ್ನು ಅಪೌಷ್ಟಿಕತೆಯಿಂದ ಬಳಲುವವರಿಗೆ ಹಂಚಿ, ಭಕ್ತಿಯಿಂದ ನಮಿಸಿದರೆ ಆ ಮಹಾಯೋಗಿ ತಣಿಯಲಾರನೇ?