ಕೋಟ(ಬ್ರಹ್ಮಾವರ): ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಂಸ್ಕಾರ ಭರಿತ ಶಿಕ್ಷಣ ನೀಡಿದರೆ ಮುಂದಿನ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಲಿದೆ ಎಂದು ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್ ಕುಂದರ್ ಹೇಳಿದರು.
ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ಚರ ದೇವಸ್ಥಾನದ ಆವರಣದಲ್ಲಿ ಕೋಟ ಸೇವಾಸಂಗಮ ಶಿಶುಮಂದಿರದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಇಂಗ್ಲಿಷ್ ಮಾಧ್ಯಮದ ಹಾವಳಿಯಲ್ಲೂ ಸೇವಾ ಸಂಗಮ ಶಿಶುಮಂದಿರ ಸಾಕಷ್ಟು ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆದು ಒಳ್ಳೆಯ ಶಿಕ್ಷಣವನ್ನು ನೀಡುತ್ತಿದೆ. ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.
ಸೇವಾಸಂಗಮ ಶಿಶುಮಂದಿರ ಬೆಳೆಯಲು ಅಲ್ಲೇ ಶಿಕ್ಷಣ ಪಡೆದವರು ಸಹಕಾರ ನೀಡಬೇಕು. ಆ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲು ಸಾಧ್ಯ ಎಂದು ಅವರು ಹೇಳಿದರು. ಕೋಟ ಸೇವಾಸಂಗಮ ಶಿಶುಮಂದಿರ ವ್ಯವಸ್ಥಾಪಕಿ ಭಾಗ್ಯ ವಾದಿರಾಜ್ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಸೇವಾಸಂಗಮ ಟ್ರಸ್ಟ್ನ ವಿಶ್ವಸ್ಥ ಕಾರ್ಯದರ್ಶಿ ಚಂದ್ರಿಕಾ ಧನ್ಯ ಶುಭ ಹಾರೈಸಿದರು.
ಕೋಟ ಸೇವಾ ಸಂಗಮ ಶಿಶುಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್ ಇದ್ದರು.
ಅಧ್ಯಕ್ಷೆ ನಾಗಲಕ್ಷ್ಮಿ ಹೆಗ್ಡೆ ಸ್ವಾಗತಿಸಿದರು.
ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ವಂದಿಸಿದರು. ಟ್ರಸ್ಟಿ ಭಾಗ್ಯಶ್ರೀ ಮಯ್ಯ ನಿರೂಪಿಸಿದರು.