ಉಡುಪಿ: 'ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ. ಕೇಂದ್ರ ಸಚಿವೆ ಆಗಬೇಕೆಂಬ ಆಕಾಂಕ್ಷೆ ಇಲ್ಲ. ದಕ್ಷಿಣ ಭಾರತದಲ್ಲಿ ಬಹಳಷ್ಟು ಹಿರಿಯ ನಾಯಕರಿದ್ದಾರೆ. ಕರ್ನಾಟಕದಲ್ಲಿಯೂ ಹಿರಿಯರಿದ್ದಾರೆ' ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.
ಎಡಮೊಗೆಯಲ್ಲಿ ಈಚೆಗೆ ನಡೆದ ಉದಯ ಗಾಣಿಗ ಕೊಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ‘ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಅಪರಾಧದಲ್ಲಿ ಪಕ್ಷ, ರಾಜ್ಯ, ಧರ್ಮ ರಾಜಕಾರಣ ಇಲ್ಲ. ಕೊಲೆ ನಡೆದ ದಿನವೇ ಗೃಹ ಸಚಿವರು ಹಾಗೂ ಎಸ್ಪಿ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ' ಎಂದರು.
ತುಳುವಿಗೆ ಸಂವಿಧಾನಿಕ ಮಾನ್ಯತೆ ಸಿಗಬೇಕು. ಸಂಸತ್ತಿನಲ್ಲೂ ಈ ಕುರಿತು ಧನಿ ಎತ್ತಿದ್ದೇನೆ. ಆದರೆ, ತುಳುರಾಜ್ಯ ಎಂಬ ಕುಚೋದ್ಯದ ಬೇಡಿಕೆಗೆ ಬೆಂಬಲ ಇಲ್ಲ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪೂರಕ ಪ್ರಯತ್ನ ಮಾಡಲಾಗುವುದು ಎಂದರು.