‘ಯುಗಾದಿ ಹಬ್ಬದ ರಾತ್ರಿ ಗುಡೆಯಂಗಡಿಯಲ್ಲಿ ಯಕ್ಷಗಾನ ಪ್ರಸಂಗ ಮುಗಿಸಿ ಅಂಕೋಲದಲ್ಲಿ ಮತ್ತೊಂದು ಆಟಕ್ಕೆ ತೆರಳಬೇಕಿತ್ತು. ಅಲ್ಲಿಯೂ ಸ್ತ್ರೀವೇಷವೇ ಇತ್ತು. ಹಾಗಾಗಿ, ಮೇಕಪ್ ಬಿಚ್ಚುತ್ತಾ ಕೂತರೆ ತಡವಾಗುತ್ತದೆ ಎಂದು ಸ್ತ್ರೀವೇಷಧಾರಿಯಾಗಿಯೇ ಕಾರು ಚಲಾಯಿಸಿಕೊಂಡು ಹೊರಟೆ. ಮಾದನಗೆರೆ ಚೆಕ್ಪೋಸ್ಟ್ ಬಳಿ ಅಧಿಕಾರಿಗಳು ತಪಾಸಣೆಗಾಗಿ ಕಾರು ತಡೆದರು. ನನ್ನ ವೇಷ ನೋಡಿ ಹೌಹಾರಿ, ಅಚ್ಚರಿಪಟ್ಟರು. ಬಳಿಕ ವಿಷಯವನ್ನೆಲ್ಲ ತಿಳಿಸಿದ ಮೇಲೆ ನಿರಾಳರಾಗಿ ಒಂದೆರಡು ಫೋಟೊ ಕ್ಲಿಕ್ಕಿಸಿಕೊಂಡು ಬಿಟ್ಟರು’ ಎಂದು ಶಂಕರ ಹೆಗಡೆ ಅವರು ಹಾಸ್ಯ ಸನ್ನಿವೇಶವನ್ನು ಬಿಚ್ಚಿಟ್ಟರು.