ಉಡುಪಿ: ಹೋಟೆಲ್ಗಳಲ್ಲಿ ತಿಂಡಿಗಳಿಗೆ ದರ ನಿಗದಿ ಮಾಡಿದಂತೆ ಅಧಿಕಾರಿಗಳ ವರ್ಗಾವಣೆಗೆ ಇಂತಿಷ್ಟು ಎಂದು ಸರ್ಕಾರ ದರ ನಿಗದಿ ಮಾಡಿರುವುದನ್ನು ‘ಪ್ರಜಾವಾಣಿ’ ಪತ್ರಿಕೆ ಸವಿಸ್ತಾರವಾಗಿ ವರದಿ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶ್ಲಾಘಿಸಿದರು.
ಶನಿವಾರ ಹಿರಿಯಡ್ಕದಲ್ಲಿ ಭೂ ಸುಧಾರಣಾ ಕಾಯ್ದೆ ಸುವರ್ಣ ಸಂಭ್ರಮ ಸಮಾವೇಶದಲ್ಲಿ ಮಾತನಾಡಿದ ಅವರು, ’ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಮಾಡಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ಕೊಡುತ್ತಿರುವ ಇಂತಹ ಸರ್ಕಾರ ಅಗತ್ಯವಿದೆಯೇ‘ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಕೇಳಲಾಗುತ್ತಿದೆ ಎಂದು ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ನಾ ಖಾವೂಂಗ, ನಾ ಖಾನೆದೂಂಗ ಎಂದು ಹೇಳುವ ಚೌಕಿದಾರ್ ಇದುವರೆಗೂ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಟೀಕಿಸಿದರು.
ಮನಮೋಹನ್ ಸಿಂಗ್ ಅಧಿಕಾರಾವಧಿಯ ಕೊನೆಯಲ್ಲಿ ದೇಶದ ಸಾಲ 53.11 ಲಕ್ಷ ಕೋಟಿಇತ್ತು. 2022ರಲ್ಲಿ 152 ಲಕ್ಷ ಕೋಟಿಗೆಏರಿಕೆಯಾಗಿದೆ. ದೇಶ ಉದ್ಧಾರ ಮಾಡುವುದಾಗಿ ಬಂದ ಮೋದಿ 8 ವರ್ಷಗಳಲ್ಲಿ ₹ 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.