ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರಿಗೆ ಸರ್ಕಾರ ನಡೆಯಬಾರದು ಎಂಬ ಉದ್ದೇಶ ಇರುವಂತಿದೆ. ಅವರೇ ಮುಖ್ಯಮಂತ್ರಿ ಎನ್ನುವ ರೀತಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ವರ್ತನೆ ಹೀಗೆಯೇ ಮುಂದುವರೆದರೆ ಸರ್ಕಾರ ಬಹಳ ದಿನ ನಡೆಯೋದು ಅನುಮಾನ’ ಎಂದು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನವರು ಅವರದ್ದೇ ಸರ್ಕಾರ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಜೆಡಿಎಸ್ ಬಗ್ಗೆ ಸ್ವಲ್ಪವೂ ಗೌರವ ಇದ್ದಂತಿಲ್ಲ. ಕಾಂಗ್ರೆಸ್ ವರ್ತನೆ ನೋಡಿ ನಮ್ಮ ಪಕ್ಷದ ವರಿಷ್ಠರು ಬೇಸತ್ತಿದ್ದಾರೆ’ ಎಂದರು.
‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೊಂದಾಣಿಕೆ ಮಾಡಿಕೊಳ್ಳಲು ಬಹಳ ಪ್ರಯತ್ನಿಸುತ್ತಿದ್ದಾರೆ. ಆದರೆ ಅಧಿಕಾರ ನಡೆಸಲು ಅವರಿಗೆ ಕಾಂಗ್ರೆಸ್ ಬಿಡುತ್ತಿಲ್ಲ. ಮನಸ್ಸು ಇಲ್ಲ ಎಂದರೆ ಏಕೆ ಕಾಂಗ್ರೆಸ್ ಸರ್ಕಾರ ನಡೆಯಬೇಕು. ಒಪ್ಪಂದದ ರೀತಿ ಸರ್ಕಾರ ನಡೆಯಬೇಕು, ಇಲ್ಲವಾದರೆ ಸರ್ಕಾರದ ಅಗತ್ಯ ಇಲ್ಲ’ ಎಂದರು.
ಕಾಂಗ್ರೆಸ್ನವರೇ ಹೆಚ್ಚಿನ ನಿಗಮ ಮಂಡಳಿಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.