ಉಡುಪಿ: ತಂದೆಯನ್ನು ಕೊಲೆ ಮಾಡಿದ ಮಗನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ನೀಡಿದೆ.
ಪೆರಂಪಳ್ಳಿಯ ಪ್ರಜೋತ್ ಶೆಟ್ಟಿ ಶಿಕ್ಷೆಗೆ ಗುರಿಯಾದ ಆರೋಪಿ. 2020ರ ಜ.13ರಂದು ಮದ್ಯಪಾನ ಮಾಡಲು ಹಣ ನೀಡಲಿಲ್ಲ ಎಂದು ಹಾಗೂ ಆಸ್ತಿಯಲ್ಲಿ ಪಾಲು ಕೊಡದ ಕಾರಣಕ್ಕೆ ತಂದೆ ಮಹಾಬಲ ಶೆಟ್ಟಿ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡು ಮಹಾಬಲ ಶೆಟ್ಟಿ ಮೃತಪಟ್ಟಿದ್ದರು.
ಅಂದಿನ ಮಣಿಪಾಲ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 25 ಸಾಕ್ಷಿಗಳ ವಿಚಾರಣೆ ನಡೆದಿತ್ತು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ದಿನೇಶ್ ಹೆಗಡೆ ಆರೋಪಿಗೆ ಜೀವಾವಧಿ ಶಿಕ್ಷೆ ₹ 10,000 ದಂಡ ವಿಧಿಸಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.