ಉಡುಪಿ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಪರ್ಯಾಯ ಮುಗಿದ ಬಳಿಕ ಕಚೇರಿಗೆ ಭೇಟಿ ನೀಡುವಂತೆ ಹಿಂದೆ ಪ್ರಧಾನಿ ಮೋದಿ ಶ್ರೀಗಳಿಗೆ ಆಹ್ವಾನ ನೀಡಿದ್ದರು. ಅದರಂತೆ ದೆಹಲಿ ಪ್ರವಾಸದಲ್ಲಿದ್ದ ಶ್ರೀಗಳು ಪ್ರಧಾನಿ ಭೇಟಿಗೆ ಉತ್ಸುಕತೆ ತೋರಿದಾಗ, ಪ್ರಧಾನಿ ಕಚೇರಿಯಿಂದ ಭೇಟಿಗೆ ಸಮಯ ನಿಗಧಿಯಾಯಿತು. ಇಬ್ಬರೂ ಉಭಯ ಕುಶಲೋಪರಿ ನಡೆಸಿದರು ಎಂದು ಶ್ರೀಗಳ ಆಪ್ತ ಸುನೀಲ್ ಪ್ರಜಾವಾಣಿಗೆ ತಿಳಿಸಿದರು.
ಗುರುಪೂರ್ಣಿಮೆಯ ದಿನ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭ ಕರಾವಳಿಯ ಸಾಂಪ್ರದಾಯಿಕ ದೇವರ ಉತ್ಸವ ಮೂರ್ತಿಯ ಪ್ರಭಾವಳಿಯನ್ನು ಪ್ರಧಾನಿಗೆ ಉಡುಗೊರೆ ನೀಡಲಾಯಿತು ಎಂದು ಅವರು ತಿಳಿಸಿದರು.
ಅವಕಾಶ ಸಿಕ್ಕರೆ ಗೋಹತ್ಯೆ ನಿಷೇಧ, ರಾಮಮಂದಿರ, ಗಂಗಾ ನದಿ ಶುದ್ಧೀಕರಣ ಕುರಿತು ಪ್ರಧಾನಿ ಬಳಿ ಚರ್ಚಿಸುವುದಾಗಿ ಶ್ರೀಗಳು ಹಿಂದೆ ತಿಳಿಸಿದ್ದರು. ಆದರೆ, ಭೇಟಿವೇಳೆ ಯಾವ ವಿಚಾರಗಳು ಚರ್ಚೆಗೆ ಬಂದವು ಎಂಬ ಮಾಹಿತಿ ಇಲ್ಲ ಎಂದು ಹೇಳಿದರು.
A special day made even more special.
On the blessed occasion of #GuruPurnima, had the honour of spending time with Sri Vishvesha Teertha Swamiji of the Sri Pejawara Matha, Udupi.
ಪಿಎಂ ಟ್ವಿಟ್ಟರ್ನಲ್ಲಿ ಸಂತಸ: ಪೇಜಾವರ ಶ್ರೀಗಳ ಭೇಟಿಯನ್ನು ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಗುರುಪೂರ್ಣಿಮೆಯ ದಿನ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಜತೆ ಕಾಲ ಕಳೆದಿದ್ದು ಖುಷಿ ಕೊಟ್ಟಿದೆ. ಸ್ವಾಮೀಜಿ ಚಿಂತನೆಗಳು, ಅವರಿಂದ ಕಲಿತ ವಿಚಾರಗಳು ವಿಶೇಷ ಅನುಭವ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.