ಉಡುಪಿ: ‘ಒಂದು ಲೇಖನದ ಸಂಪೂರ್ಣ ವಿಷಯವನ್ನು ಒಂದು ವ್ಯಂಗ್ಯಚಿತ್ರದ ಮೂಲಕ ಅಭಿವ್ಯಕ್ತಗೊಳಿಸುವ ಸಾಮರ್ಥ್ಯ ವ್ಯಂಗ್ಯಚಿತ್ರಕಾರನಿಗೆ ಇದೆ ಎಂದು ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ ಅಭಿಪ್ರಾಯಪಟ್ಟರು.
ಸುಹಾಸಂ ಸಂಸ್ಥೆ ಶನಿವಾರ ಕಿದಿಯೂರು ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಗೆ ಗೆರೆಗಳ ಕ್ಯಾರಿಕೇಚರ್ ಕಾರ್ಯ ಕರ್ಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಂಗ್ಯ ಚಿತ್ರ ಬಿಡಿಸುವುದು ಒಂದು ಕಲೆ. ದಿನನಿತ್ಯದ ಬದುಕಿನ, ಸಮಾಜದ ಪ್ರಚಲಿತ ವಿದ್ಯಮಾನಗಳ ಹಲವು ಸೂಕ್ಷ್ಮಗಳನ್ನು ಗ್ರಹಿಸಿ ಹಾಸ್ಯದ ಲೇಪನಕೊಟ್ಟು ಚಿತ್ರದ ರೂಪದಲ್ಲಿ ಹೇಳುವ ಕಲೆಯೇ ವ್ಯಂಗ್ಯಚಿತ್ರ. ಸಮಾಜದ ಚಿತ್ರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ಮನದಟ್ಟು ಮಾಡಿಸುವ ಕಲಾವಿದರು ವ್ಯಂಗ್ಯಚಿತ್ರಕಾರರು ಎಂದು ಬಣ್ಣಿಸಿದರು.
ಏಕಕಾಲದಲ್ಲಿ ಸಾರ್ವತ್ರಿಕ ಪ್ರಚಲಿತ ಸಂಗತಿಗಳನ್ನು ಹಾಗೂ ಭೂತಕಾಲದ ಸಂಗತಿಗಳನ್ನು ವ್ಯಂಗ್ಯಚಿತ್ರ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಹೇಳಬಹುದು. ಆರ್.ಕೆ.ಲಕ್ಷ್ಮಣ್ ಸೇರಿದಂತೆ ಹಲವು ಪ್ರಸಿದ್ಧ ವ್ಯಂಗ್ಯ ಚಿತ್ರಕಾರರು ಸಾಮಾಜಿಕ ವ್ಯವಸ್ಥೆಯನ್ನು, ಆಡಳಿತ ಯಂತ್ರಗಳನ್ನು ನಿರ್ಭೀತರಾಗಿ ಟೀಕಿಸಿದರು. ಅವರ ಅರ್ಥಗರ್ಭಿತ ವ್ಯಂಗ್ಯ ಚಿತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಇಂದಿಗೂ ಉಳಿದುಕೊಂಡಿವೆ. ಕನ್ನಡದಲ್ಲಿ ಉತ್ತಮ ವ್ಯಂಗ್ಯ ಚಿತ್ರಕಾರರು ಇದ್ದಾರೆ. ವ್ಯಂಗ್ಯ ಚಿತ್ರಕಾರರೆಲ್ಲರೂ ಸೇರಿ ಅಕಾಡೆಮಿ ಮಾಡುವ ಪ್ರಯತ್ನದಲ್ಲಿ ಇದ್ದಾರೆ. ಈ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ, ಜೀವನ ಶೆಟ್ಟಿಉಪಸ್ಥಿತರಿದ್ದರು.
ಖ್ಯಾತ ಹಾಗೂ ‘ಪ್ರಜಾವಾಣಿ’ ಪತ್ರಿಕೆಯ ವ್ಯಂಗ್ಯಚಿತ್ರಕಾರರಾದ ಪ್ರಕಾಶ ಶೆಟ್ಟಿ ಅವರು ಗಣ್ಯರ ಹಾಗೂ ಕಾರ್ಯಕ್ರಮದಲ್ಲಿ ನೆರೆದಿದ್ದವರ ಕ್ಯಾರಿಕೇಚರ್ ಬಿಡಿಸುವ ಮೂಲಕ ಗಮನ ಸೆಳೆದರು.
ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ರೇಖಾಚಿತ್ರಗಳು ಪ್ರಕಾಶ್ ಶೆಟ್ಟಿ ಅವರ ಕುಂಚದಲ್ಲಿ ಆಕರ್ಷಕವಾಗಿ ಮೂಡಿಬಂದವು. ಜತೆಗೆ,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವಾಸುದೇವ ಭಟ್, ವಿಶ್ವನಾಥ್ ಅವರ ಚಿತ್ರವನ್ನು ಬಿಡಿಸಿ ಪ್ರಶಂಸೆ ಪಡೆದರು.