ಕೋಟ (ಬ್ರಹ್ಮಾವರ): ‘ರಾಜ್ಯದಲ್ಲಿರುವ 34 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಇದುವರೆಗೆ ಕೋವಿಡ್ ಮಾರ್ಗಸೂಚಿಯಂತೆ ದರ್ಶನಕ್ಕೆ ಮಾತ್ರ ಸೀಮಿತ ಮಾಡಲಾಗಿತ್ತು. ಭಾನುವಾರದಿಂದ ಪ್ರಸಾದ ವಿತರಣೆ ಮತ್ತು ವಿವಿಧ ಸೇವೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ’ ಎಂದು ಹಿಂದೂ ಧಾರ್ಮಿಕ ದತ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಗ್ರಾಮದ ದೇವತೆ ಕೋಟ ಅಮೃತೇಶ್ವರಿ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೂಜೆ ಕಾರ್ಯಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿ ಲೋಕ ಕಲ್ಯಾಣರ್ಥವಾಗಿ ಪೂಜಾ ಪುನಸ್ಕಾರ ಗಳು ನೆರವೇರಿ, ದುರ್ದಿನಗಳು ದೂರವಾಗಿ, ಎಲ್ಲ ಭಕ್ತರಿಗೆ ದೇವರು ನೆಮ್ಮದಿ ಕರುಣಿಸಲಿ ಎಂದರು.
ಪಕ್ಷದ ನಿರ್ಧಾರ ಅಂತಿಮ: ಮುಖ್ಯಮಂತ್ರಿ ಬದಲಾವಣೆ ಕುರಿತು ಪತ್ರಕರ್ತರ ಜತೆಗೆ ಮಾತನಾಡಿದ ಅವರು, ಸಾಧು ಸಂತರು, ಸಮಾಜದ ಮುಖಂಡರು ಅವರ ಭಾವನೆ ವ್ಯಕ್ತಪಡಿಸುವ ಹಕ್ಕು ಇದೆ. ಆದರೆ, ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ನಿರ್ಧಾರದಂತೆ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.