ಉಡುಪಿ: ಕೇರಳದಿಂದ ಜಿಲ್ಲೆಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿ ರವಿಶಂಕರ್ ಹಾಗೂ ಆತನ ಸ್ನೇಹಿತರಾದ ಅಂಜಲ್ ಬೈಜು ಹಾಗೂ ದೇವಿ ಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಪಾಲಕ್ಕಡ್ನ ರವಿಶಂಕರ್ ರೈಲಿನ ಮೂಲಕ ಉಡುಪಿಗೆ ಗಾಂಜಾ ತಂದು ಗಾಂಜಾ ಸೇವನೆ ಮಾಡುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಪೂರೈಕೆ ಮಾಡುತ್ತಿದ್ದ. ಆರೋಪಿ ಮಣಿಪಾಲದ ಮಂಚಿಯಲ್ಲಿ ಸ್ನೇಹಿತರೊಟ್ಟಿಗೆ ಇರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿ ಚಲನ ವಲನಗಳ ಮೇಲೆ ನಿಗಾ ಇರಿಸಲಾಗಿತ್ತು.
ಶನಿವಾರ ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಸ್ನೇಹಿತರಾದ ಅಂಜಲ್ ಬೈಲು, ದೇವಿ ಪ್ರಸಾದ್ ಜತೆಗೂಡಿ ಫುಡ್ ಡೆಲಿವರಿ ಬ್ಯಾಗ್ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಸಜ್ಜಾಗಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳಿಂದ 1 ಕೆಜಿ 277 ಗ್ರಾ, 2 ಬೈಕ್, ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.