ಉಡುಪಿ: ಉಡುಪಿಯ ಕೊಳಲಗಿರಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ ತರಬೇತಿ ನೀಡುವ ಸಂಬಂಧ ಜಪಾನಿನ ಟೊಯೊಟಾ ಮೋಟಾರ್ಸ್ ಕಂಪನಿಯು ರಾಜ್ಯ ಸರ್ಕಾರದೊಂದಿಗೆ ಈಚೆಗೆ ಬೆಂಗಳೂರಿನಲ್ಲಿ ಒಡಂಬಡಿಕೆ ಮಾಡಿಕೊಂಡಿತು.
ಒಡಂಬಡಿಕೆಗೆ ಸಹಿಹಾಕಿದ ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮಾತನಾಡಿ, ತರಬೇತಿಯಿಂದ ವಿದ್ಯಾರ್ಥಿಗಳ ಕೌಶಲಮಟ್ಟ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಟೊಯೊಟಾ ಸಹಯೋಗದೊಂದಿಗೆ ಮತ್ತಷ್ಟು ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು ಎಂದರು.
ಈ ಸಂದರ್ಭ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ರಾಘವೇಂದ್ರ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯ ಉಪಾಧ್ಯಕ್ಷ ಜಿ. ಶಂಕರ ಉಪಸ್ಥಿತರಿದ್ದರು.
ಒಪ್ಪಂದದ ಅನ್ವಯ ಟೊಯೊಟಾ ಕಂಪನಿಯು ಜಿಟಿಟಿಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಆಟೊಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲಿ ಫಿಟ್ಟರ್ ಮತ್ತು ವೆಲ್ಡರ್ ಟ್ರೇಡ್ಗಳಲ್ಲಿ 3 ವರ್ಷಗಳ ವೃತ್ತಿಪರ ತರಬೇತಿ ನೀಡಲಿದೆ. ಫೆಬ್ರುವರಿಯಿಂದ ಉಡುಪಿಯ ಜಿಟಿಟಿಸಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಪ್ರಾರಂಭವಾಗಲಿದೆ. ಕೋರ್ಸ್ ಅಂತ್ಯದಲ್ಲಿ ಟೊಯೊಟಾ ಮತ್ತು ಜಿಟಿಟಿಸಿ ಜಂಟಿಯಾಗಿ ಪರೀಕ್ಷೆ ನಡೆಸಲಿದ್ದು, ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಲು ಸಹಯೋಗ ನೀಡಲಾಗುವುದು ಎಂದು ಕೌಶಲಾಭಿವೃದ್ಧಿ ಸಂಯೋಜಕ ಮಂಜುನಾಥ ನಾಯಕ್ ತಿಳಿಸಿದ್ದಾರೆ.