ಉಡುಪಿ: ಜಿಲ್ಲೆಯ ಹಲವೆಡೆ ಶುಕ್ರವಾರ ಸರಣಿ ಬೆಂಕಿ ಅನಾಹುತಗಳು ಸಂಭವಿಸಿದ್ದು, ನಾಗರಿಕರನ್ನು ಭಯಭೀತಗೊಳಿಸಿದೆ. ಹುಲ್ಲಿನ ಬಣವೆ, ಭತ್ತದ ಗದ್ದೆ, ಡಂಪಿಂಗ್ ಯಾರ್ಡ್ಗೆ ಬೆಂಕಿಬಿದ್ದಿದೆ.
ಇಂದ್ರಾಳಿಯ ಅನಂತ ನಗರ ಸಮೀಪದ ಅರಣ್ಯದಲ್ಲಿ ಬೆಂಕಿ ಕಾಣಿಸಿಕಂಡಿದ್ದು, ಹಲವು ಮರಗಳಿಗೆ ಹಾನಿಯಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಪಡುಬಿದ್ರಿಯ ನರ್ಸಲ್ ಗ್ರಾಮದಲ್ಲಿ ಶಾರ್ಟ್ ಸರ್ಕೀಟ್ನಿಂದ ಹುಲ್ಲಿನ ಬಣವೆಗೆ ಬೆಂಕಿಬಿದ್ದರೆ, ಉಡುಪಿಯ ಬೀಡಿನಗುಡ್ಡೆ ಬಯಲು ರಂಗಮಂದಿರ ಸಮೀಪದ ಡಂಪಿಗ್ ಯಾರ್ಡ್ಗೂ ಬೆಂಕಿ ತಗುಲಿತು. ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು.
ಕಡೇಕಾರ್ ಜಂಕ್ಷನ್ ಸಮೀಪ ಭತ್ತದ ಗದ್ದೆ, ಕಲ್ಸಂಕ ಸಮೀಪದ ಗದ್ದೆಗಳಲ್ಲೂ ಬೆಂಕಿ ಕಾಣಿಸಿಕೊಂಡು ಭತ್ತದ ಹುಲ್ಲು ಅಗ್ನಿಗಾಹುತಿಯಾಗಿದೆ. ಸಂತೆಕಟ್ಟೆ ಸಮೀಪದ ಕಲ್ಯಾಣಪುರ ಹಾಗೂ ಮೂಳೂರಿನಲ್ಲೂ ಬೆಂಕಿ ಅವಘಡಲಾಗಿದ್ದು, ನಾಗರಿಕರು ಆತಂಕಗೊಂಡಿದ್ದಾರೆ.
ಒಂದೇ ದಿನ ಹಲವು ಕಡೆಗಳಲ್ಲಿ ಅಗ್ನಿ ಅವಘಡಗಳ ಸಂಭವಿಸಿದ್ದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಉಡುಪಿಯ 3 ಹಾಗೂ ಮಲ್ಪೆಯ 2 ವಾಹನಗಳನ್ನು ಬೆಂಕಿ ನಂದಿಸಲು ಬಳಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.