ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥ ಶ್ರೀಗಳ ಪುರ ಪ್ರವೇಶ

Last Updated 10 ಜನವರಿ 2022, 14:20 IST
ಅಕ್ಷರ ಗಾತ್ರ

ಉಡುಪಿ: ಭಾವಿ ಪರ್ಯಾಯ ಪೀಠಾಧಿಪತಿಗಳಾದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳು ಸೋಮವಾರ ನಗರದ ಜೋಡುಕಟ್ಟೆಯ ಮೂಲಕ ಪುರಪ್ರವೇಶ ಮಾಡಿದರು.

ಪರ್ಯಾಯ ಪೂರ್ವಭಾವಿಯಾಗಿ ತೀರ್ಥಕ್ಷೇತ್ರಗಳ ಯಾತ್ರೆ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆ ಪ್ರವೇಶಿಸಿದ ವಿದ್ಯಾಸಾಗರ ತೀರ್ಥ ಶ್ರೀಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೂಮಾಲೆ ಹಾಕಿ ಸ್ವಾಗತ ಕೋರಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಪುರಪ್ರವೇಶ ಮೆರವಣಿಗೆ ನಡೆಯಿತು.

ಸ್ತಬ್ಧಚಿತ್ರಗಳು, ಕಲಾತಂಡಗಳ ಪ್ರದರ್ಶನ ಇರಲಿಲ್ಲ. ಬದಲಾಗಿ, ಸಾಂಪ್ರದಾಯಿಕ ಚಂಡೆ, ವಾದ್ಯ, ಬ್ಯಾಂಡ್‌, ಭಜನೆ, ಸಂಕೀರ್ತನಾ ತಂಡಗಳು ಮೆರವಣಿಯಲ್ಲಿದ್ದವು. ಪಟ್ಟದ ದೇವರಾದ ದ್ವಿಭುಜ ಕಾಳೀಯ ಮರ್ಧನ, ಕೃಷ್ಣ, ನರಸಿಂಹ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ತೆರೆದ ವಾಹನದಲ್ಲಿ ಕುಳಿತ ಕೃಷ್ಣಾಪುರ ಮಠದ ಶ್ರೀಗಳು ಕೃಷ್ಣಮಠದ ರಥಬೀದಿ ಪ್ರವೇಶಿಸುತ್ತಿದ್ದಂತೆ ಭವ್ಯ ಸ್ವಾಗತ ಕೋರಲಾಯಿತು. ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದ ಶ್ರೀಗಳು, ಬಳಿಕ ಅನಂತೇಶ್ವರ, ಚಂದ್ರಮೌಳೇಶ್ವರ ಹಾಗೂ ಮಧ್ವಾಚಾರ್ಯರ ದರ್ಶನ ಪಡೆದರು. ಬಳಿಕ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳು ಅರಳು ಎರಚಿ ಸಾಂಪ್ರದಾಯಬದ್ಧವಾಗಿ ಸ್ವಾಗತ ಕೋರಿದರು.

ಸಂಜೆ ರಥಬೀದಿಯಲ್ಲಿ ಅಭಿನಂದನೆ ಹಾಗೂ ಪೌರ ಸಮ್ಮಾನ ಕಾರ್ಯಕ್ರಮ ನಡೆಯಿತು. ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳು ಹಾಗೂ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳನ್ನು ಸನ್ಮಾನಿಸಲಾಯಿತು.

ಜ.18ರಂದು ಪರ್ಯಾಯ ಮಹೋತ್ಸವ ನಡೆಯಲಿದೆ. ಅಂದು ಬೆಳಗಿನ ಜಾವ 5.55ಕ್ಕೆ ವಿದ್ಯಾಸಾಗರ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಈ ಮೂಲಕ ಮುಂದಿನ 2 ವರ್ಷಗಳ ಕಾಲ ಕೃಷ್ಣನ ಪೂಜಾಧಿಕಾರಿವನ್ನು ಪಡೆದುಕೊಳ್ಳಲಿದ್ದಾರೆ.

ಕೋವಿಡ್ ಕಾರಣದಿಂದ ಈ ಬಾರಿ ಪರ್ಯಾಯ ಉತ್ಸವವನ್ನು ಸರಳ ಹಾಗೂ ಸಂಪ್ರದಾಯ ಬದ್ಧವಾಗಿ ಆಚರಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT