ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ವರ ಮಹಾಲಕ್ಷ್ಮೀ ಹಬ್ಬವನ್ನು ಶ್ರದ್ಧಾ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಮನೆಗಳಲ್ಲಿ ಲಕ್ಷ್ಮೀ ದೇವಿಗೆ ಬಂಗಾರದ ಆಭರಣಗಳಿಂದ ಸಿಂಗರಿಸಿ, ಚಿನ್ನ ಹಾಗೂ ಹಣವನ್ನು ದೇವರ ಮುಂದಿಟ್ಟು ಸಕಲ ಐಶ್ವರ್ಯ ಸಿದ್ಧಿಗೆ ಪ್ರಾರ್ಥಿಸಲಾಯಿತು.
ನಗರದ ಕಡಿಯಾಳಿ ಮಹಿಷ ಮರ್ಧಿನಿ, ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನ, ಕನ್ನಾರ್ಪಾಡಿ ಜಯದುರ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಕೃಷ್ಣಮಠದಲ್ಲಿ ವರಮಹಾಲಕ್ಷ್ಮೀ ವ್ರತದ ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ವಿಪ್ರ ಮಹಿಳೆಯರಿಂದ ಶ್ರೀಲಕ್ಷ್ಮೀ ಶೋಭಾನೆ ಪಠನಾ ಕಾರ್ಯಕ್ರಮ ನಡೆಯಿತು.
ಕಡಿಯಾಳಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್, ಮಾತೃ ಮಂಡಳಿ ಕಡಿಯಾಳಿ ಜಂಟಿ ಆಶ್ರಯದಲ್ಲಿ 38ನೇ ವರ್ಷದ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜೆ, ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ಪಾಡಿಗಾರು ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳು ನಡೆದವು. ಮುತೈದೆಯರು ಸಾಮೂಹಿಕ ಕುಂಕುಮಾರ್ಚನೆ ನೆಡೆಸಿ ವರ ಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡರು.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ್ ಆಚಾರ್ಯ, ಮುಖ್ಯ ನಿರ್ವಾಹಕ ಪದ್ಮಾ, ಪ್ರಮುಖರಾದ ವೀಣಾ ಶೆಟ್ಟಿ, ಗೀತಾ ನಾಯಕ್, ನಿರ್ಮಲಾ ಪೈ, ಸುಪ್ರಭಾ ಆಚಾರ್ಯ ಇದ್ದರು.
ಮಾರ್ಪಳ್ಳಿ ಗದ್ದುಗೆ ಅಮ್ಮನವರ ಸನ್ನಿದಾನದಲ್ಲಿ, ಮಲ್ಪೆ ಅಯ್ಯಪ್ಪ ಮಂದಿರದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂ ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ದರ ಗಗನಕ್ಕೇರಿತ್ತು. ಒಂದು ಮಾರು ಸೇವಂತಿಗೆ ಹೂಗೆ ₹ 170 ದರ ಇತ್ತು.