ಬ್ಯಾಡಗಿ: ಇಲ್ಲಿಯ ಎಪಿಎಂಸಿ ಮೆಣಸಿನಕಾಯಿ ಮಾರಾಟ ಮಾಡಿದ ರೈತರಿಗೆ ತಡವಾಗಿ ಹಣ ಪಾವತಿಸಿದ ಜಯಾ ಟ್ರೇಡರ್ಸ್ ಲೈಸೆನ್ಸ್ ರದ್ದುಪಡಿಸಲಾಗಿದೆ.ಬಳ್ಳಾರಿ ಜಿಲ್ಲೆಯ ಗೊಡ್ಡಗುನಾಳದ ರೈತ ಕೆ.ವಿರೂಪಾಕ್ಷರೆಡ್ಡಿ ಎಂಬವರು ಜಯಾ ಟ್ರೇಡರ್ಸ್ ಮೂಲಕ ಮಾರ್ಚ್ 12ರಂದು 180 ಚೀಲ ಮೆಣಸಿನಕಾಯಿ ಮಾರಾಟ ಮಾಡಿದ್ದರು. ವಿಕ್ರಿ ಪಟ್ಟಿಯಲ್ಲಿ ದಲಾಲಿ, ಪ್ಯಾಕಿಂಗ್, ಅಡ್ವಾನ್ಸ್ ಲಾರಿ ಬಾಡಿಗೆ ಕಳೆದು ಒಟ್ಟು ₹ 6,09,170 ಮಾರಾಟವಾದ 6 ದಿನದೊಳಗೆ ಪಾವತಿಸಬೇಕಿತ್ತು.ಆದರೆ ಮಾರ್ಚ್ 27ರವರೆಗೂ ಹಣ ಪಾವತಿಸದ ಹಿನ್ನೆಲೆಯಲ್ಲಿ ದಲಾಲರಿಗೆ ನೋಟಿಸ್ ನೀಡಿದಾಗ 16 ದಿನ ತಡವಾಗಿ ರೈತರಿಗೆ ಹಣ ಪಾವತಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಶಾಸನ 1966ರ ಕಲಂ 78ರನ್ವಯ ಅವರ ಲೈಸೆನ್ಸ್ ರದ್ದುಪಡಿಸಿರುವುದಾಗಿ ಎಪಿಎಂಸಿ ಕಾರ್ಯದರ್ಶಿ ತಿಳಿಸಿದ್ದಾರೆ.