ಉಡುಪಿ: ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಮಲ್ಪೆಯಲ್ಲಿ ಮೀನು ಮಾರಾಟ ಮಾಡುವ ಶಾರದಕ್ಕ ಎಂಬ ಮಹಿಳೆ ಹಸಿದವರಿಗೆ ಆಹಾರದ ನೆರವು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಮಲ್ಪೆಯ ಬಾಪುತೋಟದಲ್ಲಿ ಚಿಕ್ಕ ಗೂಡಿನಂತಿರುವ ಮನೆಯಲ್ಲಿ ವಾಸವಾಗಿರುವ ಶಾರದಕ್ಕ ಮಲ್ಪೆ ಬಂದರಿನಲ್ಲಿ ಮೀನು ಮಾರಾಟದಿಂದ ಕೂಡಿಟ್ಟಿದ್ದ ಹಣದಲ್ಲಿ ನೆರ್ಗಿ ಪರಿಸರದ 140 ಬಡ ಕುಟುಂಬಗಳಿಗೆ ತಲಾ ಐದು ಕೆ.ಜಿಯಂತೆ ಅಕ್ಕಿ ನೀಡಿದ್ದಾರೆ. ₹ 30,000 ವ್ಯಯಿಸಿ 7 ಕ್ವಿಂಟಲ್ ಅಕ್ಕಿ ಖರೀದಿಸಿ ನೆರೆಹೊರೆಯಲ್ಲಿರುವ ತೀರಾ ಬಡವರಿಗೆ ಹಂಚಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾರದಕ್ಕ, ಬಡವರ ಕಷ್ಟಗಳನ್ನು ನೋಡಿ ತಡೆಯಲಾಗಲಿಲ್ಲ. ಹಾಗಾಗಿ, ಕೂಡಿಟ್ಟ ಹಣದಲ್ಲಿ ಅಕ್ಕಿ ಖರೀದಿಸಿ ಹಂಚಿದ್ದೇನೆ. ಸದ್ಯ ಹಣವೆಲ್ಲ ಖಾಲಿಯಾಗಿದೆ, ಮೀನು ಖರೀದಿ ಮಾಡಿದವರು ಬಾಕಿ ಹಣ ಕೊಟ್ಟರೆ ಅದರಲ್ಲೂ ಅಕ್ಕಿ ಖರೀದಿಸಿ ವಿತರಿಸುವುದಾಗಿ ಹೇಳಿದರು.
ನೆರೆ ಹೊರೆಯವರು ಅಂದಮೇಲೆ ಒಬ್ಬರ ಕಷ್ಟಕ್ಕೆ ಒಬ್ಬರು ಆಗಬೇಕು. ಕೊರೊನಾ ಸೋಂಕು ಹೆಚ್ಚಾದ ಬಳಿಕ ದುಡಿಮೆ ಇಲ್ಲದೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ನೆರವು ನೀಡುತ್ತಿದ್ದೇನೆ ಎಂದರು.