ಉಡುಪಿ: ಯಕ್ಷಗಾನ ಕಲಾವಿದರಾದ ಚಿತ್ತೂರು ನಾರಾಯಣ ದೇವಾಡಿಗ (70) ಭಾನುವಾರ ಬೈಂದೂರಿನಲ್ಲಿರುವ ಪುತ್ರಿಯ ನಿವಾಸದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂಓರ್ವ ಪುತ್ರಿ ಇದ್ದಾರೆ. ಕುಂದಾಪುರ ತಾಲ್ಲೂಕಿನ ಹಳ್ನಾಡಿನ ಚಿತ್ತೂರು ನಾರಾಯಣ ದೇವಾಡಿಗರು 14ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ವೀರಭದ್ರ ನಾಯಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರ ಗರಡಿಯಲ್ಲಿ ಪಳಗಿ, ಸ್ತ್ರೀವೇಷಧಾರಿಯಾಗಿ ಮೇಳ ಸೇರಿದರು.
ಕಮಲಶಿಲೆ, ಸಾಲಿಗ್ರಾಮ, ಹಳವಾಡಿ, ಗೋಳಿಗರಡಿ, ಮಾರಣಕಟ್ಟೆ, ಸೌಕೂರು, ಮಡಾಮಕ್ಕಿ, ಪೆರ್ಡೂರು, ಮಂದಾರ್ತಿ ಹಾಗೂ ಹಾಲಾಡಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಮಾಡಿದ್ದಾರೆ. ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ, ಚಿತ್ರಾಂಗದೆ ಸೇರಿದಂತೆಹಲವು ಪೌರಾಣಿಕ ಸ್ತ್ರೀಪಾತ್ರಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು.
ಕೃಷ್ಣ, ಭೀಷ್ಮ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಇವರ ಕಲಾಸಾಧನೆಗೆ ಹಲವು ಪುರಸ್ಕಾರಗಳು ಸಂದಿವೆ. ನಾಲ್ಕು ವರ್ಷಗಳ ಹಿಂದೆ ಶಿರಿಯಾರ ಮಂಜುನಾಯ್ಕ ನೆನಪಿನಲ್ಲಿ ಯಕ್ಷಗಾನ ಕಲಾರಂಗಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.