ಶಿರಸಿ: ‘ಪ್ರತಿ ಮನೆಗೆ ತ್ರಿವರ್ಣ ಧ್ವಜ ಅಭಿಯಾನದ ಅಂಗವಾಗಿ ನಗರ ವ್ಯಾಪ್ತಿಯ 13 ಸಾವಿರ ಮನೆಗಳಿಗೆ ನಗರಸಭೆಯಿಂದ ಉಚಿತವಾಗಿ ಧ್ವಜ ನೀಡಲಾಗುವುದು, ವಾಣಿಜ್ಯ ಸಂಕೀರ್ಣಗಳ ಮೇಲೆ ಹಾರಿಸಲು 4 ಸಾವಿರ ಧ್ವಜಗಳನ್ನು ₹ 25ರ ದರದಲ್ಲಿ ಕೊಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸ್ವಾತಂತ್ರೋತ್ಸವದ ಅಮೃತ ವರ್ಷಾಚರಣೆ ಅಂಗವಾಗಿ ಆ.9 ರಿಂದ ನಗರಸಭೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದೆ. ಆ.9 ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ನಾಗರಿಕರಿಗೆ ಸನ್ಮಾನಿಸಲಾಗುವುದು. ಆ.10 ರಂದು ಮರಾಠಿಕೊಪ್ಪದಲ್ಲಿರುವ ಅಮರಜವಾನ್ ಸ್ಮಾರಕದಲ್ಲಿ ಸಂಜೆ 5 ಗಂಟೆಯಿಂದ ದೇಶಭಕ್ತಿ ಗೀತೆ, ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು. ಹಿರಿಯ ಯದು ಸೈನಿಕರನ್ನು ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.
‘ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆ.11 ರಿಂದ ಅಮರ ಜವಾನ್ ಸ್ಮಾರಕದ ಬಳಿ ಸೆಲ್ಫಿ ಪಾಯಿಂಟ್ ವ್ಯವಸ್ಥೆಯನ್ನೂ ಕಲ್ಪಿಸಲಿದ್ದೇವೆ’ ಎಂದರು.
‘ಆ.13 ರಿಂದ 15ರ ವರೆಗೆ ಪ್ರತಿಯೊಬ್ಬರೂ ಮನೆ, ಅಂಗಡಿ ಮುಂಗಟ್ಟುಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಧ್ವಜಕ್ಕೆ ಅಗೌರವ ಉಂಟಾಗದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿಯೂ ಜಾಗೃತಿ ಮೂಡಿಸಲಾಗಿದೆ’ ಎಂದೂ ಹೇಳಿದರು.
ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಪೌರಾಯುಕ್ತ ಕೇಶವ ಚೌಗುಲೆ, ಸದಸ್ಯರು, ಅಧಿಕಾರಿಗಳು ಇದ್ದರು.