ಕಾರವಾರ: ಜಿಲ್ಲೆಯಲ್ಲಿ ಗುರುವಾರ 17 ಮಂದಿಗೆ ಕೋವಿಡ್ 19 ಖಚಿತವಾಗಿದೆ. ಇವರಲ್ಲಿ ಮೂವರು ಮಾತ್ರ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಉಳಿದ 14 ಮಂದಿಯೂ ವಿದೇಶ ಮತ್ತು ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ನಲ್ಲಿದ್ದವರು.
ಭಟ್ಕಳದಲ್ಲಿ 11, ಹಳಿಯಾಳದಲ್ಲಿ ತಲಾ ಇಬ್ಬರು, ಕುಮಟಾ, ಅಂಕೋಲಾ, ಯಲ್ಲಾಪುರ ಮತ್ತು ಮುಂಡಗೋಡದಲ್ಲಿ ತಲಾ ಒಬ್ಬರು ಕೋವಿಡ್ ಪೀಡಿತರಾಗಿದ್ದಾರೆ.
ಭಟ್ಕಳದ ಸೋಂಕಿತರ ಪೈಕಿ 56, 41, 52, 55 ವರ್ಷದ ಮಹಿಳೆಯರು, 7 ಮತ್ತು 14 ವರ್ಷದ ಬಾಲಕಿಯರು, 39, 31 ಹಾಗೂ 70 ವರ್ಷದ ಪುರುಷರುದುಬೈನಿಂದಮರಳಿ ಬಂದವರಾಗಿದ್ದಾರೆ. ಸೋಂಕಿತರೊಬ್ಬರ (ರೋಗಿ ಸಂಖ್ಯೆ 12047) ಪ್ರಾಥಮಿಕ ಸಂಪರ್ಕಕ್ಕೆ ಬಂದ 41 ವರ್ಷದ ಮಹಿಳೆಗೂ ಕೋವಿಡ್ ಖಚಿತವಾಗಿದೆ.
ಹಳಿಯಾಳದ 24 ವರ್ಷದ ಮಹಿಳೆ ಮತ್ತು ಎರಡು ವರ್ಷದ ಬಾಲಕಿ ಮುಂಬೈನಿಂದ ಬಂದವರು. ಕುಮಟಾದ 35 ವರ್ಷದ ಮಹಿಳೆ ಮತ್ತು ಅಂಕೋಲಾದ 71 ವರ್ಷದ ವ್ಯಕ್ತಿಗೆ ಸೋಂಕಿತರೊಬ್ಬರ (ರೋಗಿ ಸಂಖ್ಯೆ 10648) ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ.
ಪುಣೆಯಿಂದ ಮರಳಿದ ಮುಂಡಗೋಡದ 24 ವರ್ಷದ ಯುವತಿ ಹಾಗೂ ಥಾಣೆಯಿಂದ ಬಂದಿರುವ ಯಲ್ಲಾಪುರದ 68 ಮಹಿಳೆಗೂ ಕೋವಿಡ್ 19 ಖಚಿತವಾಗಿದೆ.
ಕಳವು ಆರೋಪಿ ಗುಣಮುಖ:ಕೊರೊನಾ ಸೋಂಕಿತನಾಗಿ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಳವು ಆರೋಪಿ ಗುಣಮುಖನಾಗಿದ್ದಾನೆ. ಆಸ್ಪತ್ರೆಯಿಂದ ಗುರುವಾರ ಆತನನ್ನು ಪೊಲೀಸರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ವಾರ್ಡ್ಗೆ ದಾಖಲಿಸಿದ್ದಾಗ ಎರಡೆರಡು ಬಾರಿ ತಪ್ಪಿಸಿಕೊಂಡ ಆತ, ಪೊಲೀಸರಿಗೆ ಮತ್ತು ನಾಗರಿಕರಿಗೆ ಚಿಂತೆ ತಂದಿಟ್ಟಿದ್ದ. ಪೊಲೀಸರು ತೀವ್ರ ಹುಡುಕಾಟ ನಡೆಸಿ ಆತನನ್ನು ವಶಕ್ಕೆ ಪಡೆದು ಪುನಃ ಆಸ್ಪತ್ರೆಗೆ ದಾಖಲಿಸಿದ್ದರು.
‘ಆರೋಪಿಗೆ ಜಾಮೀನು ಸಿಕ್ಕಿರುವ ಕಾರಣ ಆತನನ್ನು ಪೊಲೀಸ್ ವಶಕ್ಕೆ ಪಡೆಯುವುದಿಲ್ಲ. ಅಲ್ಲದೇ ಪೊಲೀಸ್ ನಿಗಾದಲ್ಲಿ ಕ್ವಾರಂಟೈನ್ ಮಾಡುವ ಅಗತ್ಯವೂ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.