ಕಾರವಾರ:ಜಿಲ್ಲೆಯಲ್ಲಿ ಈ ವರ್ಷದ ಮೊದಲ ಏಳು ತಿಂಗಳ ಅವಧಿಯಲ್ಲಿ ನಾಯಿಗಳಿಂದ ಕಚ್ಚಿಸಿಕೊಂಡವರು ಬರೋಬ್ಬರಿ 6,205 ಮಂದಿ. ಶಿರಸಿ ತಾಲ್ಲೂಕಿನಲ್ಲಿ ಅತ್ಯಧಿಕ 1,138 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.
ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 75,900 ನಾಯಿಗಳಿವೆ. ಈ ಪೈಕಿ ನಗರಹಾಗೂ ಪಟ್ಟಣಗಳಲ್ಲಿ 67 ಸಾವಿರ, ಗ್ರಾಮೀಣ ಭಾಗದಲ್ಲಿ 8,900 ನಾಯಿಗಳಿವೆ ಎಂದು ಗುರುತಿಸಲಾಗಿದೆ.ಶ್ವಾನದಾಳಿ ಪ್ರಕರಣದಲ್ಲಿ ಬೀದಿನಾಯಿಗಳಿಂದ ಕಡಿತಕ್ಕೆ ಒಳಗಾದವರಸಂಖ್ಯೆಯೇ ಹೆಚ್ಚಿದೆ.
ಜಿಲ್ಲೆಯಲ್ಲಿ ಪದೇಪದೇ ನಾಯಿ ದಾಳಿಯ ಬಗ್ಗೆ ದೂರುಗಳು ಬರುತ್ತಿರುವ ಕಾರಣ ಅವುಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಗಂಡು ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಮಾಡಿಸಲಾಗುತ್ತಿದೆ. ಈ ಕಾರ್ಯವು ಈಗಆನ್ಲೈನ್ ಟೆಂಡರ್ ಹಂತದಲ್ಲಿದೆ.
ಶಸ್ತ್ರಚಿಕಿತ್ಸೆ ದುಬಾರಿ: ‘ಪ್ರತಿ ನಾಯಿಯ ಸಂತಾನಶಕ್ತಿ ಶಸ್ತ್ರಚಿಕಿತ್ಸೆಗೆ ಸರ್ಕಾರವು ₹ 465 ನಿಗದಿ ಮಾಡಿದೆ. ಈ ಲೆಕ್ಕಾಚಾರದಂತೆ ಜಿಲ್ಲೆಯ ಎಲ್ಲ ನಾಯಿಗಳಿಗೂಶಸ್ತ್ರಚಿಕಿತ್ಸೆಮಾಡಿಸಲು ₹ 3.5 ಕೋಟಿ ಬೇಕು.ಸದ್ಯಕ್ಕೆಜಿಲ್ಲೆಯಲ್ಲಿ ಒಟ್ಟು 11 ಸಾವಿರ ನಾಯಿಗಳಿಗೆ ₹ 50 ಲಕ್ಷ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ’ ಎಂದುನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ನಾಯಕ ಮಾಹಿತಿ ನೀಡಿದರು.
‘ಇವುಗಳಲ್ಲಿಗ್ರಾಮೀಣ ಭಾಗದಶೇ 10ರಷ್ಟು ಹಾಗೂ ನಗರ ಪ್ರದೇಶದಶೇ 50ರಷ್ಟು ನಾಯಿಗಳನ್ನು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.ಶಸ್ತ್ರಚಿಕಿತ್ಸೆ ಮಾಡುವವರು ಪ್ರಾಣಿ ಹಿಂಸೆತಡೆ ಕಾಯ್ದೆ 1961ರ ನಿಯಮಗಳನ್ನು ಪಾಲನೆ ಮಾಡಬೇಕು. ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರು ಮೂರು ದಿನ ತಮ್ಮ ಬಳಿಯೇ ಇಟ್ಟುಕೊಂಡು ಪರಿಶೀಲಿಸಬೇಕು. ಬಳಿಕ ಎಲ್ಲಿಂದ ನಾಯಿಗಳನ್ನು ಹಿಡಿಯಲಾಗಿತ್ತೋ ಅಲ್ಲಿಗೇತಂದು ಬಿಟ್ಟು ಆ ವ್ಯಾಪ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
‘ಯಾವ ನಗರ, ಪಟ್ಟಣ ಪ್ರದೇಶ ಅಥವಾ ಗ್ರಾಮದ ವ್ಯಾಪ್ತಿಯಲ್ಲಿ ನಾಯಿಗಳನ್ನು ಹಿಡಿಯಲಾಗಿತ್ತೋ ಅಲ್ಲಿನ ಸ್ಥಳೀಯ ಸಂಸ್ಥೆಗಳೇ ಶಸ್ತ್ರಚಿಕಿತ್ಸೆಯ ಹಣ ಪಾವತಿಸಬೇಕು’ ಎಂದೂ ಅವರು ಹೇಳಿದರು.
‘ಔಷಧಿ: ರಾಜ್ಯಮಟ್ಟದಲ್ಲೇ ಸಮಸ್ಯೆ’:ಜಿಲ್ಲೆಯಲ್ಲಿ ನಾಯಿಗಳಿಂದ ದಾಳಿಗೆ ಒಳಗಾದವರಿಗೆ ರೇಬೀಸ್ ಔಷಧಿ ಸೂಕ್ತ ರೀತಿಯಲ್ಲಿ ಸಿಗುತ್ತಿಲ್ಲ ಎಂಬುದು ಹಲವರ ದೂರಾಗಿದೆ.ಈಬಗ್ಗೆಸ್ಪಷ್ಟನೆ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ್ ಭೂತೆ, ‘ರೇಬೀಸ್ ಔಷಧಿ ಪೂರೈಕೆಯಲ್ಲಿ ರಾಜ್ಯಮಟ್ಟದಲ್ಲೇ ಸಮಸ್ಯೆಯಿದೆ. ಹಾಗಾಗಿ ಸ್ಥಳೀಯವಾಗಿ ಖರೀದಿಸುವಂತೆ ಇಲಾಖೆಯ ಕೇಂದ್ರ ಕಚೇರಿ ತಿಳಿಸಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಲಭ್ಯವಿದೆ’ ಎಂದರು.
‘ಆ ಔಷಧಿಯನ್ನು ಹೆಚ್ಚು ದಿನ ಸಂಗ್ರಹಿಸಿ ಇಡುವಂತಿಲ್ಲ. ಕೆಲವೊಮ್ಮೆ ಒಂದೇ ಬಾರಿಗೆ ಹೆಚ್ಚು ಬೇಡಿಕೆ ಬಂದಾಗ ಮಾತ್ರ ಕೊರತೆಯಾಗುತ್ತದೆ. ಆಗ ಬೇರೆ ಕಡೆಯಿಂದ ತರಿಸಿ ಚಿಕಿತ್ಸೆ ನೀಡಲಾಗುತ್ತದೆ. ನಾಯಿ ಕಚ್ಚಿದಾಗ ಯಾರೂಸ್ವಯಂ ಚಿಕಿತ್ಸೆಗೆಮುಂದಾಗಬಾದರು. ವಿಳಂಬ ಮಾಡದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.