ಕಾರವಾರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ, ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ) ಅಧಿಕಾರಿಗಳು ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಎರಡು ಕಡೆ ದಾಳಿ ಮಾಡಿದ್ದಾರೆ.
ಕಾರವಾರದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ರಾಜೀವ ನಾಯಕ ಅವರ ಮನೆಗೆ ದಾಳಿ ಮಾಡಿರುವ ಎ.ಸಿ.ಬಿ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ನಗರದ ಎಂ.ಜಿ.ರಸ್ತೆಯ ಬೃಂದಾವನ ಅಪಾರ್ಟ್ಮೆಂಟ್ನಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ರಾಜೀವ ನಾಯಕ
ಅಂತೆಯೇ, ಜಿಲ್ಲಾ ನೊಂದಣಾಧಿಕಾರಿ ಶ್ರೀಧರ ಅವರ ಹಬ್ಬುವಾಡದ ಮನೆಯಲ್ಲಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಎರಡೂ ಕಡೆಯ ದಾಳಿಗಳಲ್ಲಿ ಸ್ಥಳೀಯ ಎ.ಸಿ.ಬಿ ಡಿ.ವೈ.ಎಸ್.ಪಿ ಪ್ರಕಾಶ್ ನೇತೃತ್ವದ ತಂಡ ಮತ್ತು ಹುಬ್ಬಳ್ಳಿಯ ಅಧಿಕಾರಿಗಳ ತಂಡ ಭಾಗವಹಿಸಿವೆ.