ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಘಟ್ಟದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸರಣಿ ಅಪಘಾತದಲ್ಲಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ಕಾವ್ಯಾ ಪುರುಷೋತ್ತಮ.ಸಿ (28) ಮೃತಪಟ್ಟವರು.ಪುರುಷೋತ್ತಮ (33), ಶಂಕರ ಬಾಲಕೃಷ್ಣ, ಹೇಮಲತಾ ಇವರಿಗೆ ಗಾಯಗಳಾಗಿದ್ದು, ಯಲ್ಲಾಪುರದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯ ಪ್ರವಾಸಕ್ಕಾಗಿ ಒಂದೇ ಕುಟುಂಬದ ನಾಲ್ವರು ಫೋರ್ಡ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರನ್ನು ಓವರ್ ಟೇಕ್ ಮಾಡಿ ಲಾರಿಯೊಂದು ಮುಂದೆ ಹೋಯಿತು. ಆಗ ಹಿಂದಿನಿಂದ ಬರುತ್ತಿದ್ದ ವಿ.ಆರ್.ಎಲ್ ಸಂಸ್ಥೆಗೆ ಸೇರಿದ ಕಂಟೇನರ್ ಲಾರಿಯು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಮುಂದಿದ್ದ ಲಾರಿಯ ಕೆಳಗೆ ಕಾರು ಸಿಲುಕಿಕೊಂಡಿತು. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಇನ್ ಸ್ಪೆಕ್ಟರ್ ಮಂಜುನಾಥ ನಾಯಕ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.