ಶಿರಸಿ: ತಾಲ್ಲೂಕಿನ ಮತ್ತಿಘಟ್ಟಾ ಕೆಳಗಿನಕೇರಿಯಲ್ಲಿ ವರ್ಷದಲ್ಲಿ ಎರಡನೆ ಬಾರಿಗೆ ಶನಿವಾರ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಒಂದು ಎಕರೆಯಷ್ಟು ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ.
ಚಂದ್ರಶೇಖರ ಹೆಗಡೆ ಎಂಬುವವರಿಗೆ ಸೇರಿದ ತೋಟ ಇದಾಗಿದೆ. ವ್ಯಾಪಕ ಪ್ರಮಾಣದ ಮಳೆ ನೀರು ಹರಿದು ಬಂದ ಪರಿಣಾಮ ತೋಟ ಪ್ರದೇಶದಲ್ಲಿ ಇಂಗಿ ಕುಸಿತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಈಗ ಅವಘಡ ಸಂಭವಿಸಿದ ಜಾಗದ ಪಕ್ಕದಲ್ಲಿ ಮಧುಸೂಧನ ಹೆಗಡೆ ಎಂಬುವವರಿಗೆ ಸೇರಿದ್ದ ಒಂದು ಎಕರೆಯಷ್ಟು ತೋಟ ಕುಸಿದು ನಾಶವಾಗಿತ್ತು. ಪುನಃ ಕುಸಿತ ಉಂಟಾಗಿದ್ದು ಗ್ರಾಮಸ್ಥರನ್ನು ಆತಂಕಕ್ಕೆ ಈಡು ಮಾಡಿದೆ.
ಸ್ಥಳಕ್ಕೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್, ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ದೇವನಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಧುಮತಿ ನಾಯ್ಕ, ಸದಸ್ಯೆ ಜಯಭಾರತಿ ಭಟ್ಟ ಭೇಟಿ ನೀಡಿ ಪರಿಶೀಲಿಸಿದ್ದಾರೆ.