ಕಾರವಾರ: ‘ಶ್ರೀಸತ್ಯಸಾಯಿ ಬಾಬಾ ಅವರು ಜಿಲ್ಲೆಗೆ ಪಾದಾರ್ಪಣೆ ಮಾಡಿ 50 ವರ್ಷಗಳು ಸಂದಿವೆ. ಈ ಸವಿನೆನಪಿಗಾಗಿ ‘ಅಮರಪುರಿಯ ಆನಂದ ಯಾತ್ರೆ’ಯ ಸುವರ್ಣ ಮಹೋತ್ಸವ ಸಮಾರಂಭವನ್ನು ಇದೇ 23, 24ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ’ ಎಂದು ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮದಾಸ್ ಆಚಾರಿ ಹೇಳಿದರು.
ಶನಿವಶರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಕ್ತರ ಕರೆಗೆ ಓಗೊಟ್ಟು 1968ರ ಅ.23ರಂದು ಜಿಲ್ಲೆಗೆ ಬಂದಿದ್ದ ಅವರು, 24ರಂದೂ ಜಿಲ್ಲೆಯ ವಿವಿಧೆಡೆ ಸಂಚರಿಸಿದ್ದರು.ಮುಂಡಗೋಡ, ಶಿರಸಿ, ಅಂಕೋಲಾ, ಕಾರವಾರದಲ್ಲಿ ಅವರು ಭಕ್ತರಿಗೆ ದರ್ಶನ ನೀಡಿ, ಆಶೀರ್ವದಿಸಿದ್ದರು. ಈ ಯಾತ್ರೆಗೆ ಅವರು ‘ಅಮರಪುರಿಯ ಆನಂದ ಯಾತ್ರೆ’ ಎಂದು ಕರೆದಿದ್ದರಿಂದ ಅದೇ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.
‘ಅ.23ರಂದು ಮುಂಡಗೋಡ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಸುವರ್ಣ ಮಹೋತ್ಸವದ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಅಲ್ಲಿ ಬೆಳಿಗ್ಗೆ 7.20ರಿಂದ ವೇದ ಪಠಣ ಮತ್ತು ನಾಮಸಂಕೀರ್ತನೆ ನಡೆಯಲಿದೆ. 8.10ಕ್ಕೆ ಶ್ರೀಸತ್ಯಸಾಯಿ ಯುವಕರ ಬೈಕ್ ರ್ಯಾಲಿಗೆ ಚಾಲನೆ ನೀಡಲಾಗುವುದು. ಈ ವೇಳೆ ಯಲ್ಲಾಪುರ– ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಗೌರವ ಉಪಸ್ಥಿತಿ ಇರಲಿದ್ದಾರೆ.ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಘಟಕದ ಅಧ್ಯಕ್ಷ ನಾಗೇಶ್ ಧಾಕಪ್ಪ, ಶ್ರೀಸತ್ಯಸಾಯಿ ಎಜುಕೇಶನ್ ಟ್ರಸ್ಟ್ನ ರಾಜ್ಯ ಘಟಕದ ಸಂಚಾಲಕ ಬಿ.ಆರ್.ವಾಸುಕಿ ಹಾಜರಿರಲಿದ್ದಾರೆ’ ಎಂದು ವಿವರಿಸಿದರು.
‘ಅನಂತರ ಶಿರಸಿಯಲ್ಲಿ ಬೆಳಿಗ್ಗೆ 10.10ಕ್ಕೆ ಶೋಭಾ ಯಾತ್ರೆ ನಡೆಸಿ, 11.10ಕ್ಕೆ ವಿದ್ಯಾಧಿರಾಜ ಕಲಾಮಂಟಪದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ವೇಳೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಿರಸಿ– ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸೊರಬ ಶಾಸಕ ಕುಮಾರ ಬಂಗಾರಪ್ಪ, ಶ್ರೀಸತ್ಯಸಾಯಿ ಎಜುಕೇಶನ್ ಟ್ರಸ್ಟ್ನ ರಾಜ್ಯ ಘಟಕದ ಸಂಚಾಲಕ ಬಿ.ಆರ್.ವಾಸುಕಿ, ಶ್ರೀಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ರಿಜಿಸ್ಟ್ರಾರ್ಸಾಯಿ ಗಿರಿಧರ ಇರಲಿದ್ದಾರೆ’ ಎಂದರು.
ಶ್ರೀಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ನಾಗಪ್ಪ ಧಾಕಪ್ಪ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ರೇಡಿಯೋ ಸಾಯಿ ಗ್ಲೋಬಲ್ ಹಾರ್ಮನಿಯ ಅರವಿಂದ ಬಾಲಸುಬ್ರಹ್ಮಣ್ಯಂ ಉಪನ್ಯಾಸ ನೀಡಲಿದ್ದಾರೆ. ಕಾರವಾರದ ಸಾಯಿ ಯುವಕರಿಂದ ‘ಸಾಯಿ ಸಿಂಫೋನಿ’ ನಡೆಯಲಿದ್ದು, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಂಜೆ ಶ್ರೀಸಾಯಿ ಯುವಕರ ಬೈಕ್ ರ್ಯಾಲಿಯು ಅಂಕೋಲಾದ ಹಟ್ಟಿಕೇರಿಯ ದಿ.ವಿಶ್ವನಾಥ ಶೇಠಿಯಾ ಅವರ ಸ್ವಗೃಹಕ್ಕೆ ಬರಲಿದೆ. ಅಲ್ಲಿ ಸತ್ಸಂಗ ನಡೆಸಿ, ರಾತ್ರಿ ಕಾರವಾರಕ್ಕೆಬರಲಿದೆ ಎಂದು ಹೇಳಿದರು.
‘ಸಮಾರೋಪ ಸಮಾರಂಭವು ಅ.24ರ ಸಂಜೆ 5.40ರಿಂದ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ನಡೆಯಲಿದೆ. ಈ ಸಭಾ ಕಾರ್ಯಕ್ರಮಕ್ಕೆ ವಿಧಾನಸಭೆಯ ಸಭಾಪತಿ ಕೆ.ಆರ್.ರಮೇಶಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಶ್ರೀಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ನ ಆರ್.ಜೆ.ರತ್ನಾಕರ್, ಶ್ರೀಸತ್ಯಸಾಯಿ ಸೇವಾ ಸಂಸ್ಥೆಯ ಅಖಿಲ ಭಾರತ ಅಧ್ಯಕ್ಷ ನಿಮಿಷ ಪಾಂಡ್ಯಾ, ಕಾರವಾರ– ಅಂಕೋಲಾ ಶಾಸಕಿ ರೂಪಾಲಿ ನಾಯ್ಕ, ಅಖಿಲ ಭಾರತ ಬಾಲವಿಕಾಸ ಸಂಯೋಜಕಿ ಕಮಲಾ ಪಾಂಡ್ಯಾ ಭಾಗವಹಿಸಲಿದ್ದಾರೆ. ಶ್ರೀಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ನಾಗಪ್ಪ ಧಾಕಪ್ಪ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಮುಂಬೈನ ರವಿರಾಜ ನಾಸರೆ ತಂಡದವರಿಂದ ಭಜನಾ ಸಂಧ್ಯಾ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಶೆಟ್ಟಿ, ಪ್ರಶಾಂತ ನಾಯ್ಕ, ನಂದು ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.