ಶಿರಸಿ: ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ಅಂಗನವಾಡಿ ನೌಕರರ ಸಂಘದ ಸ್ಥಳೀಯ ಘಟಕದ ಸದಸ್ಯೆಯರು ಸೋಮವಾರ ಇಲ್ಲಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಹೆಚ್ಚುವರಿಯಾಗಿ ಒದಗಿಸಬೇಕು. ಮೊಟ್ಟೆ ಹಾಗೂ ತರಕಾರಿ ಹಣವನ್ನು ಮೂರು ತಿಂಗಳು ಮುಂಗಡವಾಗಿ ನೀಡಬೇಕು. ನಿವೃತ್ತ ಸಿಬ್ಬಂದಿಗೆ ತಕ್ಷಣ ಇಡಿಗಂಟು ಬಿಡುಗಡೆ ಮಾಡಬೇಕು. ಅನಾರೋಗ್ಯ ಸಂದರ್ಭದಲ್ಲಿ ಮೂರು ತಿಂಗಳ ರಜೆ ಸಹಿತ ವೈದ್ಯಕೀಯ ವೆಚ್ಚ ಭರಿಸಬೇಕು. ಖಾಲಿ ಹುದ್ದೆಗಳಿದ್ದಲ್ಲಿ ಎರಡು ತಿಂಗಳುಗಳೊಳಗೆ ಭರ್ತಿ ಮಾಡಬೇಕು. ಮಾತೃವಂದನಾ ಯೋಜನೆಯ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ನಿಗದಿತ ದಿನಾಂಕದೊಳಗೆ ಗೌರವಧನ ನೀಡಬೇಕು. ವರ್ಷಕ್ಕೆ ನಾಲ್ಕು ಜತೆ ಸಮವಸ್ತ್ರ ನೀಡಬೇಕು. ಪ್ರಭಾರ ಭತ್ಯೆ ಹೆಚ್ಚಿಸಬೇಕು. ಬೇರೆ ಇಲಾಖೆಯ ಕೆಲಸ ಕಡಿಮೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಸಂಘಟನೆ ಪ್ರಮುಖರಾದ ವಿದ್ಯಾ ವೈದ್ಯ, ಲೀಲಾವತಿ ಹೆಗಡೆ, ಸುಮಂಗಲಾ ಹೆರೂರಕರ್, ಶ್ರೀಲೇಖಾ ವೈದ್ಯ, ತನುಜಾ ನೇತ್ರೇಕರ, ಸವಿತಾ ಭಾಗಡ, ವೇದಾವತಿ ಹೆಗಡೆ ಇದ್ದರು.