ಭಟ್ಕಳ: ವಿಶಿಷ್ಟ ಸುವಾಸನೆಯಿಂದ ಎಲ್ಲರ ಮನಸೂರೆಗೊಂಡಿರುವ ಭಟ್ಕಳ ಮಲ್ಲಿಗೆಯ ದರ ಎರಡು ಮೂರು ದಿನಗಳ ಅವಧಿಯಲ್ಲಿ ಆಕಾಶಕ್ಕೆ ಏರಿದೆ. ಇದರಿಂದಬೆಳೆಗಾರರು ಹಾಗೂ ಮಾರಾಟಗಾರರ ಸಂತಸ ಇಮ್ಮಡಿಯಾಗಿದೆ.
ಬೇರೆ ಯಾವ ಮಲ್ಲಿಗೆಗೂ ಇಲ್ಲದ ಸುವಾಸನೆ ಭಟ್ಕಳ ಮಲ್ಲಿಗೆಗೆ ಇದೆ. ಕೇವಲ ದೇವರಿಗಷ್ಟೆ ಸೀಮಿತವಾಗದ ಈ ಪುಷ್ಪಕೃಷಿಯು ಈಗವಾಣಿಜ್ಯ ಬೆಳೆಯಾಗಿ ತಾಲ್ಲೂಕಿನಾದ್ಯಂತ ನೂರಾರು ಕುಟುಂಬಗಳ ಜೀವನ ನಿರ್ಹವಣೆ ಮಾಡುತ್ತಿದೆ. ನವರಾತ್ರಿಯ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕೆ ದೇವರ ಪೂಜೆಗೂ ರವಾನೆಯಾಗುತ್ತದೆ.ಸುಗಂಧ ದ್ರವ್ಯ ತಯಾರಿಕೆ, ಮದುವೆ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿಮಲ್ಲಿಗೆ ಇರಲೇಬೇಕು.ದೂರದ ದುಬೈಗೂ ರಫ್ತಾಗುತ್ತದೆ.
ಅಕಾಲಿಕ ಮಳೆ, ಇಳುವರಿ ಕುಸಿತ:ದರ ಏರಿಕೆಯಿಂದ ಸಂತಸಗೊಂಡಿದ್ದ ಮಲ್ಲಿಗೆ ಬೆಳೆಗಾರರು ಸೋಮವಾರ ಸಂಜೆ ಮತ್ತೆ ಹಳೆಯ ದರಕ್ಕೆ ಬಂದುದನ್ನು ಕಂಡು ನಿರಾಶೆಗೊಂಡರು. ಮಳೆಗಾಲ ಮುಗಿದರೂ ವಾಯುಭಾರ ಕುಸಿತದಿಂದ ಅಕಾಲಿಕವಾಗಿ ವ್ಯಾಪಕವಾಗಿ ಬಿದ್ದ ಗಾಳಿ ಮಳೆಯಿಂದಾಗಿ ಮಲ್ಲಿಗೆ ಗಿಡಗಳು ಕೊಳೆತು, ಮೊಗ್ಗು ಬಿಡಂತಾಗಿವೆ.
ಸುಮಾರು 10 ದಿನಗಳಿಂದ ಒಂದೂಮೊಗ್ಗು ಬಿಟ್ಟಿಲ್ಲ. ಇದರಿಂದ ಸಹಜವಾಗೇ ಬೆಳೆ ಕುಸಿತವಾಗಿ ಮಲ್ಲಿಗೆಗೆ ದರ ಏರಿರಬಹುದು ಎಂದು ಮಲ್ಲಿಗೆ ಬೆಳೆಗಾರರಾದ ಜಾಲಿಯ ಹೇಮಾವತಿ ಅವರು ಹೇಳಿದರು.
ಮಲ್ಲಿಗೆಗೆ ಸ್ಥಿರವಾದ ದರ ಇಲ್ಲ. ಆಯಾ ಕಾಲಕ್ಕೆ ದರದಲ್ಲಿ ಏರಿಳಿಕೆ ಆಗುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಮಲ್ಲಿಗೆಗೆ ಸ್ವಲ್ಪ ದರ ಹೆಚ್ಚುತ್ತಿದೆ. ₹ 100ದಾಟಿದರೆ ಅದೇ ಹೆಚ್ಚು ಎನ್ನುತ್ತಾರೆ ಮಲ್ಲಿಗೆ ಬೆಳೆಗಾರರಾದ ಮುಂಡಳ್ಳಿಯ ನರೇಂದ್ರ.
ಘಮಘಮಿಸುವ ಭಟ್ಕಳ ಮಲ್ಲಿಗೆಗೆ ಸ್ಥಿರವಾದ ದರ, ಮತ್ತು ಮಾರುಕಟ್ಟೆ ದೊರಕಿಸಿಕೊಳ್ಳಲು ಇತ್ತೀಚೆಗಷ್ಟೆ ಮಲ್ಲಿಗೆ ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಘದ ಮೂಲಕ ಮಲ್ಲಿಗೆ ಬೆಳೆಗಾರರು ನ್ಯಾಯಯುತ ಬೆಲೆ ದೊರಕಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ದರದಲ್ಲಿ ಭಾರಿ ಏರುಪೇರು:ದೇವಿಗೆ ಪ್ರಿಯವಾದ ಮಲ್ಲಿಗೆ ಶರನ್ನವರಾತ್ರಿ ವೇಳೆ ಮೊಳಕ್ಕೆ ₹ 80ರಿಂದ ₹ 100ಕ್ಕೆ ಮಾರಾಟವಾಗುತ್ತದೆ. ಉಳಿದಂತೆ ಶುಭ ಕಾರ್ಯಗಳು ನಡೆಯುವಾಗ ಹೆಚ್ಚೆಂದರೆ ₹ 40ರಿಂದ ₹50ಕ್ಕೆ ಒಂದುಮೊಳಸಿಗುತ್ತದೆ. ಆದರೆ, ಮೂರು ದಿನಗಳಿಂದ ಮಲ್ಲಿಗೆ ದರ ಏಕಾಏಕಿ₹ 150ಕ್ಕೆ ಏರಿದೆ.
ಭಾನುವಾರ ಸಂಜೆಯ ವೇಳೆಗೆ ₹ 130ಕ್ಕೆ ಇಳಿದಿತ್ತು.ಮಲ್ಲಿಗೆ ದರ ಸೋಮವಾರ ಬೆಳಿಗ್ಗೆವರೆಗೂ ₹110ರಂತೆ ಮಾರಾಟವಾಗಿದೆ. ಸಂಜೆ ವೇಳೆಗೆ ದಿಢೀರನೆ ಕೇವಲ ₹75ಕ್ಕೆಇಳಿದಿದೆ ಎಂದು ಮಲ್ಲಿಗೆ ಬೆಳೆಗಾರ ಪಾಂಡು ತಟ್ಟಿಹಕ್ಕಲ್ ಹೇಳಿದರು.