ಭಟ್ಕಳ(ಉತ್ತರ ಕನ್ನಡ): 2ಎ ಪ್ರವರ್ಗದ ಮೀಸಲಾತಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆಗ್ರಹಿಸಿ ಹಿಂದುಳಿದ ವರ್ಗ 2ಎ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ, ಸಮಾವೇಶ ಹಾಗೂ ಪಾದಯಾತ್ರೆಗೆ ವೇದಿಕೆಯ ಅಧ್ಯಕ್ಷ ಜೆ.ಡಿ.ನಾಯ್ಕ ಚಾಲನೆ ನೀಡಿದರು.
ತಾಲ್ಲೂಕಿನ ಪುರವರ್ಗದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. 2ಎ ಪ್ರವರ್ಗದ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ವಿವಿಧ ಜಾತಿಗಳ 10 ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪುರವರ್ಗದಿಂದ ಆರಂಭವಾದ ಪಾದಯಾತ್ರೆಯು ಚೌಥನಿ, ಹೂವಿನಪೇಟೆ, ರಾಜಾಂಗಣ, ಭಟ್ಕಳ ಸರ್ಕಲ್ ಮೂಲಕ ಸಾಗರ ರಸ್ತೆಯಲ್ಲಿನ ಪೊಲೀಸ್ ಮೈದಾನಕ್ಕೆ ತಲುಪಿತು. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಮೆರವಣಿಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ‘ನಮ್ಮದು ಶಾಂತಿಯುತ ಹೋರಾಟ. ಸರ್ಕಾರ ಬೇಡಿಕೆಗೆ ಮನ್ನಣೆ ನೀಡಬೇಕು. ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ರಾಜ್ಯಾದಾದ್ಯಂತ ಹೋರಾಟ ತೀವೃಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.