ಶಿರಸಿ:ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡುವ ಪಕ್ಷ. ಸರ್ಕಾರದ ನಾಯಕತ್ವದ ಮೇಲಿನ ಆರೋಪಗಳನ್ನು ಹೈಕಮಾಂಡ್ ಹಾಗೆಲ್ಲ ಒಪ್ಪದು. ಹೀಗಾಗಿ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ಆಲಿಸಲು ಬರುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, 'ಅರುಣ ಸಿಂಗ್ ನಾಲ್ಕು ಗೋಡೆಯ ನಡುವೆ ಸಚಿವರು, ಶಾಸಕರು, ಪಕ್ಷದ ಕೋರ್ ಕಮಿಟಿ ಪ್ರಮುಖರ ಅಭಿಪ್ರಾಯ ಆಲಿಸಲಿದ್ದಾರೆ' ಎಂದರು.
'ಗೊಂದಲಕ್ಕೆ ನಾಯಕತ್ವ ಕಾರಣವಲ್ಲ. ಪಕ್ಷದ ನಾಯಕರೂ ಕಾರಣರಲ್ಲ. ಸರ್ಕಾರಕ್ಕೆ ಮೊದಲೇ ಬಹುಮತ ಬಂದಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ' ಎಂದರು.
'ದಿಗ್ವಿಜಯ ಸಿಂಗ್ ಹೇಳಿಕೆಯನ್ನು ಕಾಂಗ್ರೆಸ್ ನ ಯಾವ ನಾಯಕರೂ ಖಂಡಿಸುತ್ತಿಲ್ಲ. ದೇಶ ವಿರೋಧಿ ಹೇಳಿಕೆಗಳನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂಬುದು ಸಾಬೀತಾಗುತ್ತಿದೆ' ಎಂದರು.