ಕಾರವಾರ:‘ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರು, ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಶಾಸಕಿ ರೂಪಾಲಿ ನಾಯ್ಕ ಅವರಿಗೆ ಬೆದರಿಕೆಯೊಡ್ಡಿ ಹಲ್ಲೆ ಮಾಡಲು ಯತ್ನಿಸಲಾಗಿದೆ. ಇದನ್ನುಪಕ್ಷಖಂಡಿಸುತ್ತದೆ. ಇಡೀ ಪಕ್ಷ ಶಾಸಕಿಗೆ ಬೆಂಬಲವಾಗಿ ನಿಲ್ಲುತ್ತದೆ’ ಎಂದು ಪಕ್ಷದ ಲೋಕಸಭಾ ಕ್ಷೇತ್ರದ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ರೀತಿಯ ಬೆದರಿಕೆಗಳಿಲ್ಲದೇ ಸ್ವಚ್ಛಂದವಾಗಿಕೆಲಸ ಮಾಡುವ ರೀತಿ ಆಗಬೇಕು. ಇಂತಹ ಪ್ರಕರಣಗಳು ಮುಂದುವರಿದರೆ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಚುನಾವಣೆಯ ದಿನವಾದ ಏ.23ರಂದು ರೂಪಾಲಿ ನಾಯ್ಕಸಂಚರಿಸುತ್ತಿದ್ದವಾಹನವನ್ನು ಕೆಲವರು ಅಕ್ರಮವಾಗಿ ತಡೆದು ನಿಲ್ಲಿಸಿ ಬೆದರಿಕೆ ಒಡ್ಡಿದ್ದಾರೆ. ಈ ಸಂಬಂಧ ಈಗಾಗಲೇ ಕಿಶನ್ ಕುವಳೇಕರ್ ಹಾಗೂ ದರ್ಶನ ಮಾಜಾಳಿಕರ್ ವಿರುದ್ಧ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.
‘ಈ ಹಿಂದೆಯೂ ರೂಪಾಲಿ ಅವರಿಗೆ ಯಾರೋ ಕರೆ ಮಾಡಿ ಬೆದರಿಸಿದ್ದರು. ರಾತ್ರಿ ಅವರ ಕಾರನ್ನು ಹಿಂಬಾಲಿಸಿ ಭಯದ ವಾತಾವರಣ ಸೃಷ್ಟಿಸಲು ಯತ್ನಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೂ ತರಲಾಗಿತ್ತು. ಇಂತಹ ಪ್ರಕರಣಗಳು ಮುಂದುವರಿಯದಂತೆ ಸರ್ಕಾರ ಸರಿಯಾಗಿ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.
‘ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧವೂ ಕೆಲವರು ದುರುದ್ದೇಶ ಪೂರಕವಾಗಿ ಮಾತನಾಡಿದ್ದಾರೆ. ಚುನಾವಣಾ ಭಾಷಣದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಟೀಕಿಸಿದ್ದಕ್ಕೇ ಜಾತಿಯ ಬಣ್ಣ ಕೊಡಲು ವಿರೋಧಿಗಳು ಯತ್ನಿಸಿದ್ದಾರೆ. ದಿನಕರ ಶೆಟ್ಟಿ ಅವರಿಗೆ ಹಾಲಕ್ಕಿ ಒಕ್ಕಲಿಗರ ಬಗ್ಗೆ ಅಪಾರ ಗೌರವವಿದೆ. ಆ ಜಾತಿಯ ನಾಲ್ವರು ಕುಮಟಾ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗಲು ಶ್ರಮಿಸಿದ್ದಾರೆ’ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಮನೋಜ್ ಭಟ್, ಮುಖಂಡರಾದ ಮಾರುತಿ ನಾಯ್ಕ, ಸಂದೇಶ ಶೆಟ್ಟಿ, ಕಿಶನ್ ಕಾಂಬ್ಳೆ, ವಿಕಾಸ ದೇಸಾಯಿ, ಗುರುಪ್ರಸಾದ್ ನಾಯ್ಕ ಇದ್ದರು.