ಗೋಕರ್ಣ: ಇಲ್ಲಿಯ ಸಮೀಪದ ಅಗ್ರಗೋಣದ ನಿವಾಸಿ ರಹೀಮ್ ಇದ್ರಿಸ್ ಮುಜಾವರನಿಗೆ (11) ಶುಕ್ರವಾರ ವಿಷಯುಕ್ತ ಹಾವು ಕಚ್ಚಿದೆ.ಗೋಕರ್ಣ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆಕರೆದುಕೊಂಡು ಹೋಗಲಾಗಿದೆ.
ಮೊದಲು ಆತನನ್ನು ಹತ್ತಿರದಲ್ಲಿನ ಬಂಕಿಕೊಡ್ಲಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಯಿತು.ಇಲ್ಲಿ 40 ನಿಮಿಷ ಕಾದರೂ ಯಾವುದೇ ವೈದ್ಯರು ಬರಲಿಲ್ಲ. ಬಾಲಕನಿಗೆ ಚಿಕಿತ್ಸೆ ದೊರಕದೇ ಕಂಗಾಲಾದ ಪಾಲಕರು, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು.
ಆಗಲೇ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನಿಗೆ ಡಾ.ಜಗದೀಶ ನಾಯ್ಕ ತಕ್ಷಣಆಮ್ಲಜನಕ ನೀಡಿ ಉಪಚರಿಸಿದರು. ಬಳಿಕ ಮೂರುಚುಚ್ಚುಮದ್ದುಗಳನ್ನು ನೀಡಿಆತ ಚೇತರಿಸಿಕೊಳ್ಳುವಂತೆ ಮಾಡಿದರು. ಪ್ರಾಣಾಪಾಯದಿಂದ ಸದ್ಯ ಪಾರಾದ ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿತ್ತು. ಹಾಗಾಗಿ ಕುಮಟಾ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿಯೂ ಬೇಕಾದ ಚಿಕಿತ್ಸೆ ಲಭ್ಯವಾಗದ ಕಾರಣ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.ಮಕ್ಕಳಿಗೆ ಬಳಸಲಾಗುವ ವೆಂಟಿಲೇಟರ್ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಇಲ್ಲದ್ದರಿಂದ ಬಾಲಕನನ್ನು ಕೂಡಲೇ ಉಡುಪಿಗೆ ರವಾನಿಸಲಾಯಿತು.
ಇತ್ತೀಚೆಗೆ ಗೋಕರ್ಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ವಿಷಯುಕ್ತ ಹಾವುಗಳ ಹಾವಳಿ ಹೆಚ್ಚಿದೆ. ಸ್ಥಳೀಯರು ಪದೇಪದೇ ಅಪಾಯಕ್ಕೆ ಸಿಲುಕುತ್ತಿದ್ದಾರೆ. ವರ್ಷಕ್ಕೆ 12ರಿಂದ 15 ಜನ ಹಾವಿನ ಕಡಿತಕ್ಕೆ ತುತ್ತಾಗುತ್ತಾರೆ ಎಂದು ದಾಖಲೆಗಳು ಹೇಳುತ್ತವೆ. ಅವರನ್ನು ಅಪಾಯದಿಂದ ಪಾರು ಮಾಡಲು ಪ್ರಾಥಮಿಕ ಚುಚ್ಚುಮದ್ದುಬಿಟ್ಟರೆ ಬೇರೆ ಯಾವುದೇ ಚಿಕಿತ್ಸಾ ಸೌಲಭ್ಯಗಳು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಲ್ಲ. ತಾಲ್ಲೂಕುಕೇಂದ್ರದಲ್ಲಿಯೂ ಅಗತ್ಯ ಸೌಲಭ್ಯಗಳು ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.