ಕಾರವಾರ: ನಗರದ ವಾಣಿಜ್ಯ ಬಂದರಿಗೆ ಗುರುವಾರ ತಡರಾತ್ರಿ ಬಿಟುಮಿನ್ ತಂದಿದ್ದ ‘ಎಂ.ವಿ.ವರ್ಧಮಾನ್’ ಹೆಸರಿನ ಹಡಗಿನ ಬಾಯ್ಲರ್ ಸ್ಫೋಟವಾಗಿಸಿಬ್ಬಂದಿಯೊಬ್ಬರ ಮುಖಕ್ಕೆ ಸುಟ್ಟ ಗಾಯಗಳಾಗಿವೆ.
ಗಾಯಗೊಂಡ ಸಿಬ್ಬಂದಿಯನ್ನು ಒಡಿಶಾದ ಗಂಜಾಂ ಜಿಲ್ಲೆಯ ಬೆರಾಂಪುರದ ಗುರು ಗೋವಿಂದ ಪ್ರಧಾನ್ (24) ಎಂದು ಗುರುತಿಸಲಾಗಿದೆ.ಪನಾಮಾ ದೇಶದಿಂದ ಬಂದಿದ್ದ ಈ ಹಡಗಿನಲ್ಲಿ ಅವರು ಆಯಿಲ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ಹಡಗು ಆಗ ಬಂದರಿನ ಸಮೀಪ ಸಮುದ್ರ ಮಧ್ಯೆ ಲಂಗರು ಹಾಕಿತ್ತು. ಹಾಗಾಗಿ ಬಂದರು ಅಧಿಕಾರಿಗಳು ನೌಕಾಪಡೆಗೆ ಮಾಹಿತಿ ನೀಡಿದರು. ಕೂಡಲೇ ಸ್ಪಂದಿಸಿದ ಸೀಬರ್ಡ್ ನೌಕಾಪಡೆಯ ಅಧಿಕಾರಿಗಳು ‘ಸಾಗರ ಪ್ರಹರಿ ಬಲ್’ (ಎಸ್.ಪಿ.ಬಿ) ತಂಡದ ತ್ವರಿತ ವಿಚಕ್ಷಣಾ ಹಡಗನ್ನು (ಎಫ್.ಐ.ಸಿ) ಸ್ಥಳಕ್ಕೆ ಕಳುಹಿಸಿಕೊಟ್ಟರು.
‘ಗಾಯಗೊಂಡಿದ್ದ ಯುವಕನಿಗೆ ಹಡಗಿನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಕಾರವಾರದ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.ಈ ಎಲ್ಲ ಕಾರ್ಯಾಚರಣೆಯು ಒಂದು ತಾಸಿನ ಒಳಗೇ ಪೂರ್ಣಗೊಂಡಿದೆ’ ಎಂದು ನೌಕಾಪಡೆಯುಪ್ರಕಟಣೆಯಲ್ಲಿ ತಿಳಿಸಿದೆ.