ಶಿರಸಿ: ಆಧ್ಯಾತ್ಮಿಕ ಕ್ಷೇತ್ರದ ಪ್ರಗತಿ, ಉನ್ನತಿ ಸಾಧಿಸುವ ಜತೆಗೆ ಶಿಕ್ಷಣ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ ಮೂಲಕ ಮಠಗಳು ಸಮಾಜದ ಪಾಲಿಗೆ ಕಲ್ಪತರು ಆಗಬೇಕಾದ ಅಗತ್ಯವಿದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಇಸಳೂರಿನಲ್ಲಿರುವ ಶ್ರೀನಿಕೇತನ ಶಾಲೆಯಲ್ಲಿ ಬುಧವಾರ ನಡೆದ ಕರ್ನಾಟಕ ಬ್ಯಾಂಕ್ನ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿ ₹16.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಸ್ಕಾರಯುತ ಶಿಕ್ಷಣದಿಂದ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆ ತರಬಹುದಾಗಿದೆ’ ಎಂದರು.
‘ಪ್ರಾಣಾಯಾಮಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಯೋಗಾಭ್ಯಾಸ, ಸಂಸ್ಕೃತಿ, ಪರಂಪರೆಯ ಕುರಿತಾದ ಅಧ್ಯಯನಗಳು ನಡೆಯುತ್ತಿರಲಿ’ ಎಂದು ಸಲಹೆ ನೀಡಿದರು.
ನಾಮಫಲಕ ಅನಾವರಣಗೊಳಿಸಿದ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎಸ್.ಮಹಾಬಲೇಶ್ವರ ಮಾತನಾಡಿ, ‘ಸಮಾಜಕ್ಕೋಸ್ಕರ ನೀಡಿದ ದೇಣಿಗೆ ಸದ್ಬಳಕೆಯಾಗುತ್ತದೆ ಎಂಬ ನಂಬಿಕೆ ಇದೆ. ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನು ಪ್ರತಿ ಹಳ್ಳಿಗೆ ಒದಗಿಸಲು ಸಂಘಸಂಸ್ಥೆಗಳು ಮುಂದಾದರೆ ಬದಲಾವಣೆ ಕಾಣಲು ಸಾಧ್ಯವಿದೆ. ಭವಿಷ್ಯದ ಏಳ್ಗೆಗೆ ಶಿಕ್ಷಣ ರಹದಾರಿ. ಕೇವಲ ಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ ಸಾಮಾಜಿಕ, ಸಂಸ್ಕಾರಯುತ ಶಿಕ್ಷಣ ಪಡೆಯಬೇಕು’ ಎಂದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಘುನಂದನ ಹೆಗಡೆ, ಸಹಕಾರ ಧುರೀಣ ಎನ್.ಎಸ್.ಹೆಗಡೆ ಕುಂದರಗಿ, ವಿ.ಎನ್.ಹೆಗಡೆ ಬೊಮ್ನಳ್ಳಿ, ಎನ್.ಜಿ.ಹೆಗಡೆ ಭಟ್ರಕೇರಿ, ಎಂ.ಜಿ.ಹೆಗಡೆ, ಶಿವರಾಮ ಭಟ್, ಕರ್ನಾಟಕ ಬ್ಯಾಂಕ್ ಎಜಿಎಂ ರಾಜಗೋಪಾಲ್, ನಾಗರಾಜ್ ಇದ್ದರು. ಶಾಲೆಯ ಕಾರ್ಯದರ್ಶಿ ಕೆ.ಎನ್.ಹೊಸ್ಮನಿ ಸ್ವಾಗತಿಸಿದರು.