ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಂಗಳವಾರ ರಾತ್ರಿ ಶುರುವಾರ ಜಿಟಿಜಿಟಿ ಮಳೆಯು, ಬುಧವಾರ ದಿನವಿಡೀ ಹನಿಯಿತು.
ಭೀಕರಪ್ರವಾಹದಿಂದ ಸಂತ್ರಸ್ತರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರವಾಹ ಇಳಿದ ಬಳಿಕಎರಡು ದಿನಗಳನಂತರ ಮಳೆಯಾಗುತ್ತಿದ್ದು,ಪರಿಹಾರ ಕಾರ್ಯಾಚರಣೆಗೆ ಸ್ವಲ್ಪಮಟ್ಟಿಗೆ ಅಡಚಣೆ ಮಾಡಿತು. ಆದರೆ, ನಿಧಾನವಾಗಿ ಬೀಳುತ್ತಿರುವ ಹನಿಗಳು, ಪ್ರವಾಹ ಪೀಡಿತ ಪ್ರದೇಶದ ಗದ್ದೆಗಳಲ್ಲಿ ಭತ್ತದ ಸಸಿಗಳನ್ನು ಸ್ವಚ್ಛಗೊಳಿಸುತ್ತಿವೆ.
ಕಾಳಿ,ಗಂಗಾವಳಿ ಮತ್ತು ಅಘನಾಶಿನಿ ನದಿಗಳಲ್ಲಿ ನೀರು ಉಕ್ಕಿ ಹರಿದು ಹೊಲಗದ್ದೆಗಳಲ್ಲಿ ಸಸಿಗಳು ಸಂಪೂರ್ಣ ರಾಡಿಯಿಂದ ತುಂಬಿದ್ದವು. ಇದರಿಂದ ಅವು ಒಣಗುವ ಸಾಧ್ಯತೆಯಿತ್ತು.
ಸೂಪಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಹಾಗಾಗಿ ಜಲಾಶಯಕ್ಕೆನೀರಿನ ಒಳಹರಿವು ನಿರಂತರವಾಗಿದೆ. ಬುಧವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ 561.49 ಮೀಟರ್ ನೀರು ಸಂಗ್ರಹವಾಗಿದ್ದು, ಭರ್ತಿಯಾಗಲು ಕೇವಲ 2.51 ಮೀಟರ್ ಬಾಕಿಯಿದೆ. ಒಳಹರಿವು ಇದೇ ರೀತಿ ಮುಂದುವರಿದರೆ ಈ ವರ್ಷವೂ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.
ಕದ್ರಾ ಜಲಾಶಯದಲ್ಲಿ 31.68 ಮೀಟರ್, ಕೊಡಸಳ್ಳಿಯಲ್ಲಿ 72.05 ಮೀಟರ್, ತಟ್ಟಿಹಳ್ಳದಲ್ಲಿ 465.79 ಮೀಟರ್, ಬೊಮ್ಮನಹಳ್ಳಿಯಲ್ಲಿ 435.54 ಮೀಟರ್, ಗೇರುಸೊಪ್ಪದಲ್ಲಿ 46.91 ಮೀಟರ್ ನೀರು ಸಂಗ್ರಹವಾಗಿದೆ.
ಮಳೆ ವಿವರ: ಮಂಗಳವಾರ ಬೆಳಿಗ್ಗೆ 8ರಿಂದ ಬುಧವಾರ ಬೆಳಿಗ್ಗೆ 8ರ ಅವಧಿಯಲ್ಲಿ ಹೊನ್ನಾವರದಲ್ಲಿ 10 ಸೆಂ.ಮೀ., ಕುಮಟಾದಲ್ಲಿ 9.95 ಸೆಂ.ಮೀ., ಅಂಕೋಲಾದಲ್ಲಿ 8.4 ಸೆಂ.ಮೀ., ಭಟ್ಕಳದಲ್ಲಿ 6.5 ಸೆಂ.ಮೀ. ಮಳೆಯಾಗಿದೆ ಎಂದು ರಾಜ್ಯಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ತಿಳಿಸಿದೆ.