ಶಿರಸಿ: ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಘೋಷಣೆಯಾಗಿದ್ದ ₹100 ಕೋಟಿ ಅನುದಾನದಲ್ಲಿ ಇನ್ನೂ ₹82 ಕೋಟಿ ಬಿಡುಗಡೆಗೆ ಬಾಕಿ ಇದೆ. ಕೂಡಲೆ ಇದನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮನಾಥ (ಧೀರೂ) ಶಾನಭಾಗ ಹೇಳಿದರು.
‘ಕಳೆದ ಬಾರಿಯ ಪರಿಹಾರವನ್ನೇ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡದೆ ಈ ಬಾರಿಯ ಅತಿವೃಷ್ಟಿ ಪರಿಹಾರ ಘೋಷಣೆಯಲ್ಲಿ ಸರ್ಕಾರ ತೊಡಗಿದೆ’ ಎಂದು ಟೀಕಿಸಿದರು.
‘ಕಾಮಗಾರಿ ವೆಚ್ಚದ ಮೇಲೆ ಶೇ.12ರಷ್ಟಿದ್ದ ಜಿ.ಎಸ್.ಟಿ. ದರವನ್ನು ಶೇ.18ಕ್ಕೆ ಏರಿಕೆ ಮಾಡಲಾಗಿದೆ. ರಾಜಧನವನ್ನೂ ಶೇ.5ರಷ್ಟು ಕಡಿತ ಮಾಡಲಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಇದರ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ’ ಎಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಧವ ನಾಯಕ ಮಾತನಾಡಿ, ‘ಟೆಂಡರ್ ನಲ್ಲಿ ಕಡಿಮೆ ದರಕ್ಕೆ ಬಿಡ್ ಮಾಡುವ ಪದ್ಧತಿ ಕೈಬಿಡಲು ನಿರ್ಣಯಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಪರ್ಸಂಟೇಜ್ ನೀಡದಂತೆ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.
ಸಂಘದ ನಿಟಕಪೂರ್ವ ಅಧ್ಯಕ್ಷ ಶ್ಯಾಮಸುಂದರ ಭಟ್, ಉಪಾಧ್ಯಕ್ಷ ರಮೇಶ ದುಬಾಶಿ, ಕೋಶಾಧ್ಯಕ್ಷ ಗಣೇಶ ದಾವಣಗೆರೆ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಹಿರೇಮಠ, ನಾಗೇಶ ನಾಯ್ಕ, ಅನಿಲ ಮಾಳ್ಸೇಕರ್, ಪ್ರಶಾಂತ ನಾಯ್ಕ, ದೀಪಕ ನಾಯ್ಕ, ವಿ.ಎಂ.ಹೆಗಡೆ ಇದ್ದರು.