ಶಿರಸಿ: ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾರಿಕೆ, ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ಮೂಲಕ ಸಹಕಾರ ಸಂಘಗಳು ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುವಂತೆ ಮಾಡಬೇಕು. ಆ ಮೂಲಕ ಮಹಾನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲ್ಲೂಕಿನ ಬಿಸಲಕೊಪ್ಪದ ವ್ಯವಸಾಯ ಸೇವಾ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳು ಸ್ವದೇಶಿ ವಸ್ತುಗಳ ಬಳಕೆ, ಸರಳ ಜೀವನ ಪದ್ಧತಿಯನ್ನು ಸದಸ್ಯರಿಗೆ ಹೇಳಿಕೊಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮನೆಯ ಚಾವಡಿ, ಅಂಗಳದಲ್ಲಿ ಕಾರ್ಯನಿರ್ವಹಣೆ ನಡೆಸುತ್ತ ಬೃಹತ್ ಪ್ರಮಾಣಕ್ಕೆ ಬೆಳೆದ ಬಿಸಲಕೊಪ್ಪ ಸೊಸೈಟಿ ಸಹಕಾರ ಕ್ಷೇತ್ರದಲ್ಲಿ ಮಾದರಿ ಸಂಸ್ಥೆ ಎಂದು ಶ್ಲಾಘಿಸಿದರು.
ನೂತನ ಗೋದಾಮು ಕಟ್ಟಡ ಉದ್ಘಾಟಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ಜೀವಂತಿಕೆ ಇದ್ದಷ್ಟು ರೈತರ ಬದುಕು ಹಸನಾಗುತ್ತ ಸಾಗುತ್ತದೆ. ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಸಹಕಾರ ಕ್ಷೇತ್ರದ ಭದ್ರ ಅಡಿಪಾಯ ಎಂದರು.
ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿದರು. ಸಂಘದ ಅಧ್ಯಕ್ಷ ಎಸ್.ಎನ್.ಭಟ್ಟ ಬಿಸಲಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷರು, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಕಾರ್ಯನಿರ್ವಾಹಕರಿಗೆ ಸನ್ಮಾನಿಸಲಾಯಿತು. ಸಂಸದ ಅನಂತಕುಮಾರ ಹೆಗಡೆ ಶತಪಥ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ನಿರ್ದೇಶಕ ಸುನೀಲ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಸಹಕಾರ ಸಂಘದ ಉಪನಿಬಂಧಕ ನಿಂಗರಾಜು ಎಸ್., ಸಂಸ್ಥೆಯ ಉಪಾಧ್ಯಕ್ಷ ಟಿ.ಎಂ.ಅಶೋಕ, ನಿರ್ದೇಶಕರು ಇದ್ದರು. ಸಂಘದ ಕಾರ್ಯನಿರ್ವಾಹಕ ಅಭಿಷೇಕ ಹೆಗಡೆ ಸ್ವಾಗತಿಸಿದರು.