ಕಾರವಾರ: 'ನನ್ನ ಕಷ್ಟಗಳು ನಿವಾರಣೆಯಾಗುವಂತೆ ಅಭಿಮಾನಿಗಳು ಪ್ರಾರ್ಥಿಸಿಕೊಂಡಿದ್ದರು. ಎಲ್ಲ ದುಃಖ ದೂರ ಮಾಡುವ ದೇವಿ ದುರ್ಗೆಯಾಗಿದ್ದಾಳೆ. ಅವಳನ್ನು ನಂಬಿ ಪ್ರಾರ್ಥನೆ ಸಲ್ಲಿಸಿದ್ದೇನೆ' ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಅಂಕೋಲಾ ತಾಲ್ಲೂಕಿನ ಆಂದ್ಲೆ ಗ್ರಾಮದ ಜಗದೀಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರ ಜೊತೆ ಮಾತನಾಡಿದರು.
'ನನ್ನ ತಾಯಿ ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿದ್ದರು. ತಾಯಿಯ ಹರಕೆಯಂತೆ ದೇವಿಯ ದರ್ಶನ ಮಾಡಲು ಬಂದಿದ್ದೇನೆ. ದೇವಸ್ಥಾನಕ್ಕೆ ಬಂದಿರುವುದು ನನ್ನ ಖಾಸಗಿ ಕಾರ್ಯಕ್ರಮ. ಇಲ್ಲಿ ಸಲ್ಲಿಸಿರುವ ಪೂಜೆ, ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ' ಎಂದು ಡಿಕೆಶಿ ಪ್ರತಿಕ್ರಿಯಿಸಿದರು.
ನಂತರ ಗೋಕರ್ಣಕ್ಕೆ ಭೇಟಿ ನೀಡಲು ತೆರಳಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಜೆಡಿಎಸ್ ಮುಖಂಡ ಎ.ರವೀಂದ್ರ ನಾಯ್ಕ ಜೊತೆಗಿದ್ದರು.